More

    ಸಿಂದಗಿಯಲ್ಲಿ ಕುತೂಹಲ ಮೂಡಿಸಿದ ವಿಜುಗೌಡರ ರ‌್ಯಾಲಿ !

    ವಿಜಯಪುರ: ಸಿಂದಗಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿರುವಾಗಲೇ ಬಿಜೆಪಿ ಮುಖಂಡ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲರ ಬೈಕ್ ರ‌್ಯಾಲಿ ತೀವ್ರ ಕುತೂಹಲ ಕೆರಳಿಸಿದೆ.
    ಬಿಜೆಪಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದ್ದು ಆಗಲೇ ಕೆಲವರು ಟಿಕೆಟ್‌ಗಾಗಿ ವರಿಷ್ಟರ ದುಂಬಾಲು ಬಿದ್ದಿದ್ದಾರೆ. ಇನ್ನೂ ಕೆಲವರು ’ಟಿಕೆಟ್ ನನ್ನದೇ’ ಎಂದು ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಅಂಥದರಲ್ಲಿ ಬಬಲೇಶ್ವರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ವಿಜುಗೌಡ ಪಾಟೀಲರು ನಡೆಸಿದ ಬೃಹತ್ ಬೈಕ್ ರ‌್ಯಾಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
    ಭಾನುವಾರ ಸಿಂದಗಿಯಲ್ಲಿ ವಿಜುಗೌಡರ ಅಭಿಮಾನಿಗಳು ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ತನ್ನಿಮಿತ್ತ ವಿಜುಗೌಡರು ಪಟ್ಟಣಕ್ಕೆ ತೆರಳುತ್ತಿದ್ದಂತೆ ಜಮಾಯಿಸಿದ ಅಪಾರ ಅಭಿಮಾನಿಗಳು ಗೌಡರನ್ನು ಹೊತ್ತುಕೊಂಡು ಮೆರದಾಡಿದರು. ಮಹಾತ್ಮ ಬಸವೇಶ್ವರ ಪುತ್ಥಳಿಗೆ ಹೂಮಾಲೆ ಹಾಕಿ ವಿಜುಗೌಡ ಪಾಟೀಲ ಕೆಳಗಿಳಿದಿದ್ದೇ ತಡ ಅಪಾರ ಕಾರ್ಯಕರ್ತರು ವಿಜುಗೌಡರಿಗೆ ಹೂಮಾಲೆ ಹಾಕಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಮಾತ್ರವಲ್ಲ, ತೆರೆದ ವಾಹನದಲ್ಲಿ ಬೃಹತ್ ಮೆರಣಿಗೆ ಹಮ್ಮಿಕೊಂಡರು. ನೂರಾರು ಬೈಕ್‌ಗಳು ಮೆರಣಿಗೆಯಲ್ಲಿ ಕಾಣಿಸಿಕೊಂಡಿದ್ದು ಚುನಾವಣೆ ಪ್ರಚಾರದಂತಿತ್ತು. ಬಳಿಕ ವಿಜುಗೌಡರು ಸಮುದಾಯ ಭವನದತ್ತ ತೆರಳಿ ಸನ್ಮಾನ ಸ್ವೀಕರಿಸಿದರು. ಈ ವೇಳೆ ಕೆಲವು ಕಾರ್ಯಕರ್ತರು ಸಿಂದಗಿ ವಿಧಾನ ಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಆಹ್ವಾನ ನೀಡಿದ್ದು ಕಂಡು ಬಂದಿತು. ಆದರೆ, ವಿಜುಗೌಡರು ಮಾತ್ರ ‘ಹಂಪೈರ್ ಸಿಟಿ ಹೊಡೆಯದ ಹೊರತು ನಾನೇನೂ ತೀರ್ಮಾನ ತೆಗೆದುಕೊಳ್ಳುವಂತಿಲ್ಲ’ ಎಂದಿದ್ದು ವಿಶೇಷವಾಗಿತ್ತು.
    ಒಟ್ಟಿನಲ್ಲಿ ಉಪಸಮರ ಮುಂದಿಟ್ಟುಕೊಂಡು ವಿಜುಗೌಡ ಪಾಟೀಲರ ಅಭಿಮಾನಿಗಳು ನಡೆಸಿದ ಬೈಕ್ ರ‌್ಯಾಲಿ ಸಾಕಷ್ಟು ಕುತೂಹಲ ಸೃಷ್ಟಿಸಿದ್ದಂತೂ ನಿಜ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts