ನಾಗಮಂಗಲ; ಸಾಹಿತ್ಯ ನಮ್ಮ ಬದುಕನ್ನು ಸರಿದಾರಿಗೆ ಕೊಂಡೊಯ್ಯುವ ದಾರಿದೀಪ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರೊ.ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರ ಕರುಣಾಕರ ಮತ್ತು ಲಚ್ಚವ್ವ ಕೃತಿಗಳ ಬಿಡುಗಡೆ ಮತ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಮಾನದಲ್ಲಿ ಯುವ ಪೀಳಿಗೆ ತಮ್ಮ ಬುದ್ಧಿಯನ್ನು ಸಮಸ್ಥಿತಿಯಲ್ಲಿರಿಸಿಕೊಳ್ಳಬೇಕು. ತಳುಕಿನ ಪ್ರಪಂಚಕ್ಕೆ ಮಾರು ಹೋಗದೆ ವಾಸ್ತವದ ಜೀವನವನ್ನು ಅರಿಯಬೇಕಿದೆ. ಶ್ರೇಷ್ಠ ಸಾಹಿತಿಗಳ ಸಾಹಿತ್ಯದ ಸಾರಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹಾಸನದ ಎ.ವಿ.ಕಾಂತಮ್ಮ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸೀ.ಚ.ಯತೀಶ್ವರ್ ಮಾತನಾಡಿ, ಲಲಿತ ಕಲೆಗಳ ಜ್ಞಾನವಿಲ್ಲದಿದ್ದರೆ ಮನುಷ್ಯ ಮೃಗನಾಗುತ್ತಾನೆ. ಪ್ರಾಚೀನ ಕಾಲದಿಂದ ಇಂದಿನವರೆಗೂ ಸಾಹಿತ್ಯ ಕ್ಷೇತ್ರದ ಕೊಡುಗೆಯಿಂದ ಇಂದು ಸಮಾಜ ಸರಿ ದಾರಿಯಲ್ಲಿ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕೃತಿ ರಚನೆಕಾರರಾದ ಪ್ರೊ.ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಮಾತನಾಡಿದರು. ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ಪ್ರಾಂಶುಪಾಲ ಡಾ.ರವೀಂದ್ರ, ಸಾಹಿತಿ ದಿನೇಶ್ಹೆರಗನಹಳ್ಳಿ, ಪ್ರೊ.ಅನಂತರಾಜೇ ಅರಸ್, ಪ್ರೊ.ಚಂದ್ರೇಗೌಡ, ಮುಖಂಡ ಬಿಂಡೇನಹಳ್ಳಿ ಕೃಷ್ಣೇಗೌಡ ಇದ್ದರು.