More

    ಸಾಲ ಪಡೆಯದ ರೈತರ ನೋಂದಾಯಿಸಿ

    ಶಿವಮೊಗ್ಗ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈಗಾಗಲೇ ಸಾಲ ಪಡೆಯದ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಕೆ.ಬಿ.ಶಿವಕುಮಾರ್ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

    ಗುರುವಾರ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆ ನಡೆಸಿದ ಅವರು, ಇದುವರೆಗೆ ಯೋಜನೆಯಡಿ ಜಿಲ್ಲೆಯಲ್ಲಿ 504 ರೈತರು ಮಾತ್ರ ಹೆಸರು ನೋಂದಾಯಿಸಿದ್ದು, ಮುಂದಿನ ದಿನಗಳಲ್ಲಿ ಆ ಪ್ರಮಾಣ ಹೆಚ್ಚಾಗಬೇಕಿದೆ ಎಂದರು.

    504ರ ಪೈಕಿ 266 ರೈತರು ಸಾಲ ಪಡೆದಿದ್ದಾರೆ. 238 ಮಂದಿ ಸಾಲ ಪಡೆದಿಲ್ಲ. 952 ಎಕರೆ ವಿಸ್ತೀರ್ಣವಿದೆ. ಇದುವರೆಗೆ ಸಾಲ ಪಡೆದ ರೈತರು ಕಡ್ಡಾಯವಾಗಿ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದ್ದರು. ಆದರೆ ಈ ಬಾರಿ ಬೆಳೆ ವಿಮೆಯಿಂದ ತಮ್ಮನ್ನು ಕೈಬಿಡುವಂತೆ ಸಾಲ ಪಡೆದ ರೈತರು ಘೊಷಣಾ ಪತ್ರ ನೀಡಿದರೆ ಅವರನ್ನು ಕೈಬಿಡಲಾಗುವುದು. ಈ ಹಿನ್ನೆಲೆಯಲ್ಲಿ ಸಾಲ ಪಡೆಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯಡಿ ನೋಂದಾಯಿಸಬೇಕೆಂದು ಹೇಳಿದರು.

    ಬೆಳೆ ವಿಮೆ ಸಂಸ್ಥೆ ತನ್ನ ಪ್ರತಿನಿಧಿಗಳನ್ನು ರೈತರ ಸಹಾಯಕ್ಕಾಗಿ ಪ್ರತಿ ತಾಲೂಕಿನಲ್ಲಿ ನಿಯೋಜಿಸಬೇಕು. ಬೆಳೆ ವಿಮೆ ನೋಂದಣಿ ಮತ್ತು ಪರಿಹಾರ ಇತ್ಯರ್ಥ ಕುರಿತಾಗಿ ಬ್ಯಾಂಕ್​ಗಳು ಮತ್ತು ವಿಮಾ ಸಂಸ್ಥೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಾಮನ್ ಸರ್ವೀಸ್ ಸೆಂಟರ್​ಗಳ ಮೂಲಕ ಸಾಲ ಪಡೆಯದ ರೈತರ ನೋಂದಣಿಯನ್ನು ಪ್ರೋತ್ಸಾಹಿಸಬೇಕು. ನೋಂದಣಿ ಸಂದರ್ಭದಲ್ಲಿ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆ ಪಡೆಯಬೇಕೆಂದರು.

    ಬ್ಯಾಂಕುಗಳಿಗೆ ಸೂಚನೆ: ಕರೊನಾ ಸಂದರ್ಭದಲ್ಲಿ ಸರ್ಕಾರ ವಿವಿಧ ಫಲಾನುಭವಿಗಳಿಗೆ ನೀಡುವ ಸಹಾಯಧನದ ಮೊತ್ತವನ್ನು ಬ್ಯಾಂಕ್​ಗಳು ಯಾವುದೇ ಕಾರಣಕ್ಕೂ ಅವರ ಸಾಲದ ಮೊತ್ತಕ್ಕೆ ಕಡಿತಗೊಳಿಸಬಾರದು. ಈ ಕುರಿತು ಯಾವುದೇ ದೂರುಗಳು ಬರಬಾರದು ಎಂದು ಡಿಸಿ ಬ್ಯಾಂಕರ್​ಗಳಿಗೆ ಎಚ್ಚರಿಕೆ ನೀಡಿದರು.

    ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಕೆ, ಶುಂಠಿ ಮತ್ತು ಕಾಳು ಮೆಣಸು ಬೆಳೆಯುವ ರೈತರಿಗೆ ಮುಂಗಾರು ಅವಧಿಗೆ ಹೆಸರು ನೋಂದಾಯಿಸುವ ಅವಧಿಯನ್ನು ಜು.10ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿ ಯೋಜನೆ ಪ್ರಯೋಜನ ಪಡೆದುಕೊಳ್ಳುವಂತೆ ಡಿಸಿ ಮನವಿ ಮಾಡಿದರು.

    ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳ ಬೆಳೆಗಳಿಗೆ ನೋಂದಾಯಿಸಲು ಆಗಸ್ಟ್ 14 ಮತ್ತು ಮುಸುಕಿನ ಜೋಳ ಬೆಳೆ ವಿಮೆ ನೋಂದಾಯಿಸಲು ಜು.31 ಅಂತಿಮ ದಿನ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್ ಹೇಳಿದರು.

    ಯೋಜನೆ ಕುರಿತ ಪ್ರಚಾರ ಸಾಮಾಗ್ರಿಗಳನ್ನು ಡಿಸಿ ಕೆ.ಬಿ.ಶಿವಕುಮಾರ್ ಬಿಡುಗಡೆ ಮಾಡಿದರು. ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧಾ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬ್ರಿಜೆಟ್ ವರ್ಗೀಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts