ನೆಲಮಂಗಲ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ದೇವರ ಸೇವೆಗೆ ಸಮ ಎಂದು ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಹಾಗೂ ಸಂತ್ರಸ್ತರಿಗೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಆಹಾರಪೊಟ್ಟಣ ವಿತರಿಸಿ ಮಾತನಾಡಿದರು.
ಲಾಕ್ಡೌನ್ಯಿಂದ ಲಕ್ಷಾಂತರ ಮಂದಿ ಶ್ರಮಜೀವಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಇಂಥ ಸಂದರ್ಭದಲ್ಲಿ ಸ್ಥಳೀಯ ಮಟ್ಟದಲ್ಲಿ ಜನಪ್ರತಿನಿಧಿಗಳು, ಉಳ್ಳವರು ಕೈಲಾದ ಸಹಾಯ ಮಾಡುವುದು ಮಾನವಧರ್ಮ. ಈ ನಿಟ್ಟಿನಲ್ಲಿ ಚಿಂತಿಸಿ ನಿತ್ಯ ಸಾರ್ವಜನಿಕರಿಗೆ ಆಹಾರಪೊಟ್ಟಣ ವಿತರಿಸಲಾಗುತ್ತಿದೆ. ಜತೆಗೆ ಶಾಸಕರ ನಿಧಿಯಿಂದ ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡಲಾಗುತ್ತಿದೆ. ನಾನು ಕೂಡ ಕರೊನಾ ಸೋಂಕಿಗೆ ತುತ್ತಾಗಿ ಗುಣಮುಖನಾಗಿದ್ದೇನೆ. ಸೋಂಕಿತರಿಗೆ ಧೈರ್ಯ ಅತ್ಯಂತ ಮುಖ್ಯವಾದದ್ದು ಎಂದರು.
ಮುಖಂಡ ಕೋಡಪನಹಳ್ಳಿ ವೆಂಕಟೇಶ್ ಮಾತನಾಡಿ, ಕರೊನಾ ಸೋಂಕು ಹರಡುವಿಕೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಲಾಕ್ಡೌನ್ ಜಾರಿ ಮಾಡಿರುವುದು ಸರಿಯಿದೆ. ಆದರೆ ನಿತ್ಯದ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳಿಗೆ ತೊಂದರೆಯಾಗಿದೆ. ನಿತ್ಯ ನಗರದಲ್ಲಿ ನೂರಾರು ಮಂದಿ ನಿರಾಶ್ರಿತರು ಹಸಿವಿನಿಂದ ಕಂಗಾಲಾಗಿದ್ದಾರೆ. ಇದನ್ನು ಮನಗಂಡು ಅವರ ಕಷ್ಟಕ್ಕೆ ಸ್ಪಂದಿಸಲು ಶಾಸಕರ ನೇತೃತ್ವದಲ್ಲಿ ನಿತ್ಯ ಮಧ್ಯಾಹ್ನ 300ಕ್ಕೂ ಹೆಚ್ಚು ಮಂದಿಗೆ ಆಹಾರಪೊಟ್ಟಣ ವಿತರಿಸಲಾಗುತ್ತಿದೆ ಎಂದು ಹೇಳಿದರು.
ನೆ.ಯೋ. ಪ್ರಾಧಿಕಾರ ಮಾಜಿ ಅಧ್ಯಕ್ಷ ಎನ್.ಪಿ. ಹೇಮಂತ್ಕುಮಾರ್, ಕಣೇಗೌಡನಹಳ್ಳಿ ಗ್ರಾಪಂ ಸದಸ್ಯ ಸನಾವುಲ್ಲಾ, ಅರೆಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಂಜನಮೂರ್ತಿ, ಮುಖಂಡ ಗೋಪಾಲಕೃಷ್ಣ ಮತ್ತಿತರರು ಇದ್ದರು.
ಆಕ್ಸಿಜನ್ ಕಾನ್ಸನ್ಟ್ರೇಟರ್ ವಿತರಣೆ: ಶಾಸಕರ ನಿಧಿಯಿಂದ 60 ಆಕ್ಸಿಜನ್ ಕಾನ್ಸನ್ಟ್ರೇಟರ್ ಖರೀದಿಸಿದ್ದು, ಶುಕ್ರವಾರ ಸಾಂಕೇತಿಕವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಸ್ತಾಂತರಿಸಲಾಗುವುದು. ನಂತರ ತಾಲೂಕಿನ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲಾ 5 ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡಲಾಗುವುದು ಎಂದು ಶಾಸಕ ಹೇಳಿದರು.