ಕುಶಾಲನಗರ: ಶಿಕ್ಷಣ ಸಂಸ್ಥೆಗಳ ಏಳಿಗೆಯಲ್ಲಿ ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗಿದ್ದು, ಶಿಕ್ಷಣ ಸಂಸ್ಥೆಗಳೊಂದಿಗೆ ಪಾಲಕರು ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಬೇಕು ಎಂದು ಉದ್ಯಮಿ ಕಿಶೋರ್ ಕುಮಾರ್ ಹೇಳಿದರು.
ಕೂಡಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಪಾಲಕರು, ಶಾಲೆ ಆಡಳಿತ ಮಂಡಳಿ, ಶಿಕ್ಷಕ ವೃಂದ ಸಮಾಜಕ್ಕೆ ಸಂಸ್ಕಾರಯುತ ಪ್ರಜೆಗಳನ್ನು ಸೃಷ್ಟಿ ಮಾಡಬೇಕಿದೆ. ಜತೆಗೆ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳ ಪ್ರಗತಿಗೆ ದಾನಿಗಳ ಸಹಕಾರ ಮುಖ್ಯ ಎಂದರು.
ಶಾಲೆಗೆ ಕಿಶೋರ್ ಕುಮಾರ್ 25ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರ ಭಾವಚಿತ್ರ ಮತ್ತು ಶಾಲೆ ಅಭಿವೃದ್ಧಿಗೆ ಪೂರಕವಾದ ಸಹಕಾರ ನೀಡಿದ್ದು, ಶಾಲೆ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅನಸುಯಾ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ತಮ್ಮಣ್ಣೇಗೌಡ, ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ, ಮುಖ್ಯ ಶಿಕ್ಷಕಿ ಸಣ್ಣಕ್ಕ, ಸಿಆರ್ಪಿ ಶಾಂತಕುಮಾರ್, ಸಹ ಶಿಕ್ಷಕರಾದ ವಿಜಯಲಕ್ಷ್ಮೀ, ಕಮಲಾ, ದೀಪಿಕಾ ಇತರರಿದ್ದರು.