ವಡಗೇರಾ : ತಾಲೂಕಿನ ಗೋನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಗೂರು ಗ್ರಾಮದ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಉಳಿಮೆ ಮಾಡುತ್ತಿದ್ದು, ಕೂಡಲೇ ಸರ್ಕಾರ ಇದನ್ನು ತಡೆದು ವಶಕ್ಕೆ ಪಡೆದುಕೊಳ್ಳಬೇಕು ಎಂದು ಕೋಲಿ ಸಮಾಜದ ಸಂಘಟನಾ ಕರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು.
ಗ್ರಾಮದ ಸರ್ವೇ ನಂ. ೭ರಲ್ಲಿ ೯ ಎಕರೆ ಮತ್ತು ೧೨ರಲ್ಲಿ ೩೮.೦೫ ಎಕರೆ ಸರ್ಕಾರಿ ಭೂಮಿ ಇದ್ದು, ಅನಧಿಕೃತವಾಗಿ ಕೆಲ ಪಟ್ಟಭದ್ರ ಶಕ್ತಿಗಳಿಂದ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದಾರೆ. ಈ ಜಮೀನಿನಲ್ಲಿ ಗ್ರಾಮದ ಜನರು ತಮ್ಮ ದನಕರುಗಳು, ಕುರಿ ಮೇಕೆ ಮೇಯಿಸಲು ಹೋದರೆ ಅವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಮಹಿಳೆಯರು ಬಟ್ಟೆ ತೊಳೆಯಲು ಹೊಳೆಗೆ ಹೋಗಲು ದಾರಿ ಕೂಡ ಬಿಡುತ್ತಿಲ್ಲ. ಇದರಿಂದಾಗಿ ಜನರು ತಮ್ಮ ದನಕರುಗಳನ್ನು ಮನೆಯಲ್ಲಿಯೇ ಕಟ್ಟಿಹಾಕಿ ಮೇಯಿಸುವ ಪರಿಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು.
ಹೀಗಾಗಿ ಕೂಡಲೇ ಈ ಭೂಮಿಯನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಸವರಾಜ ಇಟಗಿ, ಆಂಜನೇಯ ನಾಯ್ಕೋಡಿ, ಬಸವರಾಜ, ರವಿಕುಮಾರ, ಮರೆಪ್ಪ, ಮಲ್ಲಿಕಾರ್ಜುನ, ಶರಣಪ್ಪ, ಮಾದೇವ, ತಾಯಪ್ಪ, ಹನುಮೇಶ್, ಬಸವರಾಜ ಬೂದೂರ, ತಾಯಪ್ಪ ಮುನ್ಗಲ್, ಚಂದ್ರಯ್ಯ, ತಿಮ್ಮಪ್ಪ, ಸಾಬಯ್ಯ ಇತರರಿದ್ದರು.