ಯಲ್ಲಾಪುರ: ಒಂದು ಕಾಲದಲ್ಲಿ ಸರ್ಕಾರಿ ಆಸ್ಪತ್ರೆ ಎಂದರೆ ಅಸಡ್ಡೆ ತೋರುವ ಸ್ಥಿತಿ ಇತ್ತು. ಆದರೆ, ಸರ್ಕಾರ ವಿಶೇಷ ಮುತುವರ್ಜಿ ವಹಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯ ಕಲ್ಪಿಸುವ ಮೂಲಕ ಮಾದರಿಯಾಗಿಸುವಲ್ಲಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವಾರದಲ್ಲಿ ತಾ.ಪಂ ಅನುದಾನ ಹಾಗೂ ಸೆಲ್ಕೊ ಸೋಲಾರ ಫೌಂಡೇಷನ್ ಸಹಕಾರದಿಂದ ನಿರ್ವಿುಸಿದ ಸೋಲಾರ್ ಆಧಾರಿತ ಮಾದರಿ ಪ್ರಸೂತಿಗೃಹವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸೆಲ್ಕೊ ಫೌಂಡೇಷನ್ ಮುಖ್ಯಸ್ಥ ಹರೀಶ ಹಂದೆ ಮಾತನಾಡಿ, ಗುಣಮಟ್ಟವನ್ನು ಸಾದರಪಡಿಸುವುದರೊಂದಿಗೆ ರಾಜ್ಯ-ದೇಶಗಳಲ್ಲಿ ಸೆಲ್ಕೊ ವಿಭಿನ್ನವಾದ ಸಂಗತಿಗಳನ್ನು ರೂಪಿಸಿದೆ. ಇಂಧನ ಉಳಿತಾಯ ಹಾಗೂ ಭವಿಷ್ಯದ ಬಗೆಗಿನ ಚಿಂತನೆ ನಮ್ಮ ಮುಂದಿದೆ. ಆ ನಿಟ್ಟಿನಲ್ಲಿ ಸಂಸ್ಥೆ ವಿಧಾಯಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ತಾ.ಪಂ. ಅಧ್ಯಕ್ಷೆ ಚಂದ್ರಕಲಾ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಸೆಲ್ಕೊ ಸಂಸ್ಥೆಯ ಸಿಇಒ ಮೋಹನ ಹೆಗಡೆ, ಎಂ.ಎಲ್.ಸಿ ಶಾಂತಾರಾಮ ಸಿದ್ದಿ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ತಾಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯರಾದ ಮಾಲಾ ಚಂದಾವರ, ರಾಧಾ ಹೆಗಡೆ, ನಾಗರಾಜ ಕವಡಿಕೇರಿ, ಪಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣಕರ್, ಸೆಲ್ಕೊದ ಹಿರಿಯ ವ್ಯವಸ್ಥಾಪಕ ಭರತ ಶೆಟ್ಟಿ, ಡಿಜಿಎಂ ಪ್ರಸನ್ನ ಹೆಗಡೆ, ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ ಭಾಗ್ವತ, ಸುಬ್ರಾಯ ಹೆಗಡೆ ಇತರರಿದ್ದರು.
ಆಡಳಿತ ವೈದ್ಯಾಧಿಕಾರಿ ಡಾ.ರಾಮಾ ಹೆಗಡೆ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ, ಡಾ. ಸೌಮ್ಯಾ.ಕೆ.ವಿ ನಿರ್ವಹಿಸಿದರು.