ಚಿತ್ರದುರ್ಗ: ರಾಜ್ಯದ ವಿವಿಧ ಮುಖ್ಯಮಂತ್ರಿಗಳ ಅವಧಿ ಆಗಿದ್ದ ಸಾಲ ಪ್ರಸ್ತಾಪಿಸಿ, ಸರ್ಕಾರದ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ ಆರೋಪದಡಿ ಹೊಸದುರ್ಗ ತಾಲೂಕು ಕಾನುಬೇನಹಳ್ಳಿ ಸರ್ಕಾರಿ ಕಿರಿಯ ಶಾಲೆ ಶಿಕ್ಷಕ ಎಂ.ಜಿ.ಶಾಂತಮೂರ್ತಿ ಅವರನ್ನು ಶನಿವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಎಸ್.ಎಂ.ಕೃಷ್ಣ ಅವಧಿ 3590 ಕೋಟಿ ರೂ.ಸಾಲ,ಧರ್ಮಸಿಂಗ್-15635, ಎಚ್ಡಿಕೆ-3545, ಬಿ.ಎಸ್.ಯಡಿಯೂರ ಪ್ಪ-25653, ಸದಾನಂದಗೌಡ-9464,ಜಗದೀಶ್ ಶೆಟ್ಟರ್-13464, ಸಿದ್ದರಾಮಯ್ಯ ಅವಧಿ 2.42 ಲಕ್ಷ ಕೋಟಿ ರೂ. ಸಾಲವಾಗಿದೆ.
ಎಸ್ಎಂಕೆಯಿಂದ ಶೆಟ್ಟರ್ವರೆಗಿದ್ದ ಸಾಲ 71331 ಕೋಟಿ ರೂ.,ಸಿದ್ದು ಮಾಡಿದ್ದ ಸಾಲ 2.42 ಲಕ್ಷ ಕೋಟಿ ರೂ., ಬಿಟ್ಟಿ ಭಾಗ್ಯ ಕೊಡದೆ ಇನ್ನೇನು ಎಂದು ಮುಖ್ಯಮಂತ್ರಿಗಳು ಮಾಡಿದ್ದ ಸಾಲಗಳ ಕುರಿತಂತೆ,ಸಿದ್ದರಾಮಯ್ಯ ಅವರು 2ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶವನ್ನು ಹಂಚಿಕೊಂಡಿದ್ದರ ವಿರುದ್ಧ ಡಿಸಿಗೆ ದೂರು ಸಲ್ಲಿಕೆಯಾಗಿತ್ತು.
ಈ ಕುರಿತಂತೆ ಡಿಡಿಪಿಐ ನಿರ್ದೇಶನದ ಮೇರೆಗೆ ಶಿಕ್ಷಕ ಶಾಂತಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಹೊಸದುರ್ಗ ಬಿಇಒ ಎಂ.ಜಯಪ್ಪ ಆದೇಶಿಸಿದ್ದಾರೆ.