ಚಿಕ್ಕಮಗಳೂರು: ಬಿಜೆಪಿ ಸರ್ಕಾರ ಜನ ವಿರೋಧಿ ನೀತಿ ಅನುಸರಿಸಿ ಅಗತ್ಯ ವಸ್ತುಗಳ ಬೆಲೆ ಏರಿಸಿ ಸಾಮಾನ್ಯ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ಆರೋಪಿಸಿದರು.
ಅಂಬೇಡ್ಕರ್ ಭವನದಲ್ಲಿ ಗುರುವಾರ ಸಿಪಿಐ 13ನೇ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಪಿಐ ಕಾರ್ಯಕರ್ತರು ರಾಜ್ಯಕ್ಕೆ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇತರೆ ಪಕ್ಷದವರು ಸಭೆ ಸಮಾರಂಭಗಳಿಗೆ ಹಣ ಕೊಟ್ಟು ಜನರನ್ನು ಕರೆದುಕೊಂಡು ಬಂದರೆ, ನಮ್ಮ ಪಕ್ಷದ ಕಾರ್ಯಕರ್ತರು ಸ್ವಂತ ಖರ್ಚಿನಲ್ಲಿ ಸಭೆ ಸಮಾರಂಭಗಳಿಗೆ ಆಗಮಿಸುತ್ತಾರೆ ಎಂದರು.
ಬಿಜೆಪಿ ಬಂಡವಾಳಶಾಹಿಗಳ ಪರ ಕೆಲಸ ಮಾಡಿಕೊಂಡು, ಜನ ಸಾಮಾನ್ಯರನ್ನು ನಿಲರ್Âಕ್ಷಿಸಿದೆ. ಅಭಿವೃದ್ಧಿ ಮಾಡುತ್ತೇವೆಂದು ಕೊಳ್ಳೆ ಹೊಡೆದ ಹಣದಲ್ಲಿ ಚುನಾವಣೆ ನಡೆಸಿ ಗೆಲ್ಲುತ್ತಿದೆ. ಮುಂಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಿಲ್ಲಾ ಸಹ ಕಾರ್ಯದರ್ಶಿ ಜಿ.ರಘು ಮಾತನಾಡಿ, ಬಿಜೆಪಿ ಸರ್ಕಾರ 8 ವರ್ಷದ ಆಡಳಿತ ಅವಧಿಯಲ್ಲಿ ಜನ ಸಾಮಾನ್ಯರಿಗೆ ಯಾವುದೇ ಅನುಕೂಲ ಮಾಡಿಕೊಡದೆ ದಿನ ನಿತ್ಯದ ಆಹಾರ ಪದಾರ್ಥಗಳು ಮತ್ತು ಸಿಲಿಂಡರ್ ಬೆಲೆ ಏರಿಸಿ ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆರೋಪಿಸಿದರು.
ಜಿಲ್ಲಾ ಸಹಕಾರ್ಯದರ್ಶಿ ಎಸ್.ಎಲ್.ರಾಧಾ ಸುಂದರೇಶ್ ಮಾತನಾಡಿ, ಬಿಜೆಪಿ ಧರ್ಮ ಮತ್ತು ಜಾತಿಯ ವಿಷ ಬೀಜ ಬಿತ್ತಿ ಯುವ ಪೀಳಿಗೆಯನ್ನು ದಾರಿ ತಪ್ಪಿಸಿ ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ಅಧಿಕಾರ ನಡೆಸುತ್ತಿದೆ. ಒಂದು ಸುಳ್ಳನ್ನು ನೂರುಬಾರಿ ಹೇಳಿ ಅದೇ ಸತ್ಯವೆಂದು ಹೇಳುತ್ತಿದೆ ಎಂದು ದೂರಿದರು.
ಸಿಪಿಐ ರಾಜ್ಯ ಮಂಡಳಿ ಸದಸ್ಯ ಎಸ್.ವಿಜಯ್ಕುಮಾರ್, ತಾಲೂಕು ಕಾರ್ಯದರ್ಶಿ ಜಾರ್ಜ್ ಆಸ್ಟೀನ್, ಹೆಡದಾಳ್ ಕುಮಾರ್, ಎಸ್.ಕೆ.ದಾನು, ರಮೇಶ್, ರವಿ, ತಾರಾನಾಥ್, ಜಯಾನಂದ, ವಸಂತ್ಕುಮಾರ್ ಇದ್ದರು.