ಕಲಬುರಗಿ: ಎದ್ದೇಳು ಕರ್ನಾಟಕ ಒಕ್ಕೂಟ, ತಳ ಸಮುದಾಯ ಒಕ್ಕೂಟದಿಂದ ಗುರುವಾರ ಬೆಳಗ್ಗೆ ೧೧ಕ್ಕೆ ನಗರದ ಎಚ್ಕೆಸಿಸಿಐ ಸಭಾಂಗಣದಲ್ಲಿ ಗುಜರಾತ್ನ ಶಾಸಕ ಜಿಗ್ನೇಶ ಮೇವಾನಿಯೊಂದಿಗೆ ಸಮುದಾಯಗಳೊಂದಿಗೆ ಸಂವಾದ ಆಯೋಜಿಸಲಾಗಿದೆ ಎಂದು ಎದ್ದೇಳು ಕರ್ನಾಟಕ ಒಕ್ಕೂಟದ ಮುಖಂಡರಾದ ಬಸವರಾಜ ಕೌತಾಳ, ಅಶ್ವಿನಿ ಮದನಕರ್ ತಿಳಿಸಿದರು. ಸಂವಿಧಾನಕ್ಕಿರುವ ಅಪಾಯ, ಜಾತಿ-ಧರ್ಮದ ರಾಜಕಾರಣ, ಬಂಡವಾಳಿಗರ ಚುಕ್ಕಾಣಿ, ಚುನಾವಣೆ ಸಂದಿಗ್ಧತೆ ಸೇರಿ ವಿವಿಧ ವಿಷಯದ ಕುರಿತು ಜಿಗ್ನೇಶ ಮೇವಾನಿ ಜತೆ ಸಂವಾದ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದಲಿತ ಪರ ಸಂಘಟನೆಗಳು, ಪ್ರಗತಿಪರ ಚಿಂತಕರು ಸೇರಿ ೧೨೦ ಸಂಘಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ ಎಂದರು. ಪ್ರಮುಖರಾದ ಮರೆಪ್ಪ ಹಳ್ಳಿ, ಸಂಧ್ಯಾರಾಜ ಸ್ಯಾಮ್ಯುವೆಲ್, ಅಬ್ದುಲ್ ಖಾದರ್, ರಾಜೇಂದ್ರ ರಾಜವಾಳ, ದತ್ತಾತ್ರೇಯ ಇಕ್ಕಳಕಿ ಇದ್ದರು.