ಶಹಾಬಾದ್: ಪಠ್ಯೇತರ ಚಟುವಟಿಕೆ ಜತೆ ಸಾಮಾಜಿಕ ಜವಾಬ್ದಾರಿ, ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಪೀಠಿಕೆಯಾಗಿದ್ದು, ನಮ್ಮೊಂದಿಗೆ ಸುತ್ತಲಿನ ಸಮಾಜದ ಅಭಿವೃದ್ಧಿಗೆ ಕೈಗೂಡಿಸಬೇಕು ಎಂದು ನಗರಸಭೆ ಸಮುದಾಯ ಸಂಪನ್ಮೂಲ ಅಧಿಕಾರಿ ರಘುನಾಥ ನರಸಾಳೆ ಹೇಳಿದರು.
ನಗರದ ಸರ್ಕಾರಿ ಮೆಟ್ರಿಕ್ಪೂರ್ವ ವಸತಿನಿಲಯದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ, ಕೂಡಲಸಂಗಮ ಶಿಕ್ಷಣ ಸಂಸ್ಥೆ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಹಯೋಗದಡಿ ಸಶಕ್ತ ಮಹಿಳೆ ದೇಶದ ಹೆಮ್ಮೆ (ಸ್ವಸ್ಥ ಸಮಾಜ) ಶೀರ್ಷಿಕೆಯಡಿ ಒಂದು ವಾರದ ಎನ್ನೆಸ್ಸೆಸ್ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ನಾವು ಹೂವಿನಂತೆ ಇದ್ದಷ್ಟು ದಿನ ಸಮಾಜದ ಉನ್ನತಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಆರ್.ಜಿ. ಶೆಟಗಾರ ಮಾತನಾಡಿ, ಸಶಕ್ತ ಮಹಿಳೆ ದೇಶದ ಹೆಮ್ಮೆ ಶೀರ್ಷಿಕೆಯಂತೆ ವಿದ್ಯಾರ್ಥಿನಿಯರು ಕೇವಲ ಪಠ್ಯದಿಂದ ಸುಶಿಕ್ಷಿತರಾಗದೆ, ಮಾನಸಿಕವಾಗಿ ಸುಶಿಕ್ಷಿತರಾಗಬೇಕು. ನಮ್ಮ ಮನೆ, ನಮ್ಮ ಪರಿಸರ, ನಮ್ಮ ಊರಿನ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪತ್ರಕರ್ತ ಕೆ.ರಮೇಶ ಭಟ್ಟ, ಮೇಲ್ವಿಚಾರಕ ರಮೇಶ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಭೀಮರಾವ ಸೂಗುರ, ಸದಸ್ಯ ಕಾಶೀನಾಥ ಗಂಧಿಗುಡಿ, ಮೋಹನ ಚವ್ಹಾಣ್, ಪತ್ರಕರ್ತ ಲೋಹಿತ ಕಟ್ಟಿ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿ ಸಂಪದ ಪ್ರಾರ್ಥಿಸಿದರು. ಉಪನ್ಯಾಸಕ ಪೀರ್ ಪಾಶಾ ಸ್ವಾಗತಿಸಿದರು. ಶಿಬಿರದ ಅಧ್ಯಕ್ಷ ನಾನಾಗೌಡ ಹಿಪ್ಪರಗಿ ಪ್ರಾಸ್ತಾವಿಕ ಮಾತನಾಡಿದರು. ಗುರುಲಿಂಗಪ್ಪ ತುಂಗಳ ನಿರೂಪಣೆ ಮಾಡಿದರು. ನಾಗರತ್ನಾ ಇಂಗಿನಶೆಟ್ಟಿ ವಂದಿಸಿದರು.