ಹುಕ್ಕೇರಿ: ಯಾವುದೇ ವ್ಯಕ್ತಿ ಸಮಾಜಮುಖಿಯಾಗಿ ಕರ್ತವ್ಯ ನಿಭಾಯಿಸಿದಲ್ಲಿ ಆತನನ್ನು ಸಮಾಜ ಗೌರವಿಸುತ್ತದೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಹಿರೇಮಠದಲ್ಲಿ ಬುಡಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಮಹಾಂತೇಶ ಹಿರೇಮಠ ಅವರಿಗೆ ‘ಗುರುಕಾರುಣ್ಯ’ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು.
38 ವರ್ಷದ ಸತತ ಸೇವೆಯ ಲದಿಂದಾಗಿ ಮಹಾಂತೇಶ ಹಿರೇಮಠ ಅವರಿಗೆ ಗಣರಾಜ್ಯೋತ್ಸವದಂದು ಬೆಳಗಾವಿಯ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ‘ಸರ್ವೋತ್ತಮ ಪ್ರಶಸ್ತಿ’ ಸ್ವೀಕರಿಸಿದ್ದಾರೆ. ಅದರ ಜತೆಗೆ ನಮ್ಮ ರಂಭಾಪುರಿ ಪೀಠ ಸಹ ಅವರಿಗೆ ‘ಗುರು ಕಾರುಣ್ಯ’ ಪ್ರಶಸ್ತಿ ನೀಡಿರುವುದು ಅತೀವ ಸಂತಸ ತಂದಿದೆ. ನಾವೆಲ್ಲರೂ ಸಾಮಾಜಿಕ ವ್ಯವಸ್ಥೆಯಲ್ಲಿ ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡುವುದನ್ನು ಕಲಿಯಬೇಕಿದೆ ಎಂದರು.
ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ಮಾತನಾಡಿ, ಹುಕ್ಕೇರಿ ಹಿರೇಮಠ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜತೆಗೆ ಜನಮುಖಿಯಾಗಿ ಕಾರ್ಯ ನಿರ್ವಹಿಸುವವರನ್ನು ಗುರುತಿಸಿ ಗೌರವಿಸುತ್ತದೆ ಎಂದರು.
ಹಿರೇಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯ ಮಾತನಾಡಿ, ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಹುಕ್ಕೇರಿ ಹಿರೇಮಠವು ಮೂಲ ಮಠ ಮತ್ತು ಜಗದ್ಗುರು ಆಶಯದಂತೆ ಕಾರ್ಯ ನಿರ್ವಹಿಸುತ್ತಿದೆ. ಭಕ್ತರಿಂದ ಭಕ್ತರಿಗಾಗಿ ಇರುವ ಶ್ರೀಮಠ ಭಕ್ತರ ಸೇವೆಯನ್ನು ಗುರುತಿಸುವ ಕಾರ್ಯ ಸದಾ ಮಾಡುತ್ತದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಮಹಾಂತೇಶ ಹಿರೇಮಠ ಮಾತನಾಡಿದರು. ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ನೂಲದ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಬ್ಯಾಳಿ, ಮಹಾವೀರ ನಿಲಜಗಿ, ಬಾಲಾಜಿ ಸಾವಳಗಿ, ಸುಹಾಸ ನೂಲಿ ಮತ್ತಿತರರಿದ್ದರು.