ವಿಜಯಪುರ: ವರುಣನಾರ್ಭಟಕ್ಕೆ ಬಸವಳಿದ ಬಿಸಿಲೂರಿನ ಜನರ ಸಂಕಷ್ಟ ಆಲಿಸಲು ಬಂದ ಕೇಂದ್ರ ಅಧ್ಯಯನ ತಂಡ ತರಾತುರಿಯಲ್ಲಿ ಕಾಲ್ಲಿತ್ತಿದ್ದಕ್ಕೆ ರೈತರ ಆಕ್ರೋಶ ವ್ಯಕ್ತವಾಗಿದೆ.
ಗುರುವಾರ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡ ಕೇವಲ ಐದು ನಿಮಿಷದಲ್ಲಿ ಪರಿಶೀಲನೆ ಮುಕ್ತಾಯಗೊಳಿಸಿದೆ. ಇಷ್ಟು ಅಲ್ಪ ಸಮಯದಲ್ಲಿ ತಂಡ ಅದೆಂಥ ಪರಿಶೀಲನೆ ನಡೆಸಿತು ಎಂದು ರೈತರು ಆಕ್ರೋಶ ಹೊರಹಾಕಿದರು.
ಪ್ರತೀ ಬಾರಿಯೂ ಮಳೆಯಿಂದಾಗಿ ಅಪಾರ ಹಾನಿ ಅನುಭವಿಸುತ್ತಿದ್ದೇವೆ. ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಬೆಳೆ ಹಾನಿಯಾಗಿ ಅಪಾರ ನಷ್ಟವಾಗುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸಿ ಎಂದು ರೈತರು ಆಗ್ರಹಿಸಿದರು. ಆದರೆ ಅಧಿಕಾರಿಗಳು ಕನ್ನಡ ಅರಿಯದ ಕಾರಣ ಯಾವುದಕ್ಕೂ ಸ್ಪಂದಿಸದೆ ತೆರಳಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಕೃಷಿ ಜಂಟಿ ನಿರ್ದೇಶಕಿ ರೂಪಾ ಎಲ್, ಉಪ ಕೃಷಿ ನಿರ್ದೇಶಕ ಚಂದ್ರಕಾಂತ್ ಪವಾರ್,ಸಹಾಯಕ ಕೃಷಿ ನಿರ್ದೇಶಕ ಮಹದೇವಪ್ಪ ಎವೂರ, ಸೋಮನಗೌಡ ಬಿರಾದಾರ, ಎ. ಆರ್. ನಾಯಕ ಮತ್ತಿತರರಿದ್ದರು.