ನಾಗರಮುನ್ನೋಳಿ: ತೋಟಪಟ್ಟಿಗಳಿಗೆ ಸಂಜೆ 6 ರಿಂದ ರಾತ್ರಿ 10ರ ವರೆಗೆ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ನೂರಾರು ರೈತರು ಮಂಗಳವಾರ ಇಲ್ಲಿನ 110 ಕೆವಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಕೇಂದ್ರದ ಎದುರು ಅಡುಗೆ ಮಾಡಿ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ವಾರದಿಂದ ತೋಟದ ಪಟ್ಟಿಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಮುಂದೆ ಈ ರೀತಿಯಾಗದಂತೆ ಕ್ರಮ ವಹಿಸಿ. ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವವರೆಗೆ ಕೇಂದ್ರದಿಂದ ತೆರಳುವುದಿಲ್ಲ ಎಂದು ಹಠ ಹಿಡಿದರು.
ಸರಿಯಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮನೆಯಲ್ಲಿ ಸಂಜೆ ಸಮಯದಲ್ಲಿ ತೊಂದರೆಯಾಗುತ್ತದೆ. ಹಾಗೂ ಬೆಳೆಗಳಿಗೆ ನೀರುಣಿಸಲು ಪಂಪ್ಸೆಟ್ ಕೂಡ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದರು.
ಹೆಸ್ಕಾಂ ಎಂ.ಡಿ.ಭಾರತಿ ಅವರಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿದಾಗ, ಸಂಜೆ ಸಮಯದಲ್ಲಿ ವಿದ್ಯುತ್ ನೀಡಲು ನಮಗೆ ತೊಂದರೆ ಇಲ್ಲ. ಆದರೆ, ರೈತರು ರಾತ್ರಿ ಸಮಯದಲ್ಲಿ ಪಂಪ್ಸೆಟ್ ಪ್ರಾರಂಭಿಸುತ್ತಾರೆ. ಇದರಿಂದ ವಿದ್ಯುತ್ ಕೇಂದ್ರದಲ್ಲಿ ಒತ್ತಡ ಸೃಷ್ಟಿಯಾಗುತ್ತಿದೆ.
ಕಾರಣ, ಮುಂದೆ ಕೂಡ ಸಂಜೆ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತೇವೆ. ಆದರೆ, ಯಾರೂ ಪಂಪ್ಸೆಟ್ ಚಾಲನೆ ಮಾಡಬಾರದು ಎಂದರು. ರೈತರಾದ ಲಕ್ಷ$್ಮಣ ಈಟಿ, ಮಲ್ಲಪ್ಪ ಟೋನಪೆ, ಮಸವರಾಜ ಮನಗೂಳಿ, ಸರದಾರ ಮುಲ್ತಾನಿ, ಮಲ್ಲು ಈಟಿ, ಮಹಾಂತೇಶ ಈಟಿ, ಮಲ್ಲಪ್ಪ ವಗರ್, ಹನುಮಂತ ಈಟಿ,ಪ್ರವಿಣ ಮನಗೂಳಿ, ಮನೋಜ ಮನಗೂಳಿ, ಸಚೀನ ಟೋಣಪೆ, ಪುಂಡಲಿಕ್ ಮೋಳಗಿ, ರಾಯಪ್ಪ ಕಟ್ಟಕ್ಕಾರ, ಯಲ್ಲಪ್ಪ ಕಟ್ಟಿಕ್ಕಾರ, ಯಲ್ಲಪ್ಪ ನಾಗರಾಳೆ ಇತರರಿದ್ದರು.