ತೆಲಸಂಗ: ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಉದ್ದು ಬೆಳೆದ ಜಮೀನಿನಲ್ಲಿ ನೀರು ನಿಂತು ಬೆಳೆ ಹಾಳಾಗಿದೆ. ಪ್ರಸಕ್ತ ವರ್ಷ ವಾಡಿಕೆಗಿಂತ ಮುಂಚೆ ಮುಂಗಾರು ಮಳೆ ಆರಂಭವಾಗಿದ್ದರಿಂದ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ದು ಬಿತ್ತನೆ ಮಾಡಲಾಗಿತ್ತು.
ಈ ಹಿಂದೆ ಮಳೆಯಾಗಿದ್ದ ಸಂದರ್ಭದಲ್ಲಿ ಉದ್ದು ಬಿತ್ತನೆ ಮಾಡಿದ ಜಮೀನಿನಲ್ಲಿ ನೀರು ನಿಂತ ಪರಿಣಾಮ ಎಲೆ ಹಳದಿ ಬಣ್ಣಕ್ಕೆ ತಿರುಗಿ ಚುಕ್ಕೆಗಳು ಕೂಡಿ ಸಂಪೂರ್ಣ ಕಂದು ಬಣ್ಣಕ್ಕೆ ತಿರುಗಿ ಅಲ್ಪಸ್ವಲ್ಪ ಉಳಿದುಕೊಂಡಿತ್ತು. ಆದರೆ, ಸತತ 3 ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಗೆ ಇದ್ದ ಬೆಳೆಯೂ ನಾಶವಾಗಿದೆ.
ಸಾಲ ಮಾಡಿ ಬೀಜ ಗೊಬ್ಬರ ಹಾಕಿ ಬೆಳೆಸಿದ್ದ ಉದ್ದು ಮಳೆ ಸಿಲುಕಿ ನಾಶವಾಗುತ್ತಿರುವುದು ರೈತರನ್ನು ಚಿಂತೆಗೆ ದೂಡಿದೆ. ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿರುವುದಕ್ಕೆ ರೈತರು ಕಂಗಾಲಾಗಿದ್ದಾರೆ.