ಮಂಡ್ಯ : ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆಯಬೇಕೆಂದು ಜಿಲ್ಲೆಯ ಇನ್ನರ್ವ್ಹೀಲ್ ಅಧ್ಯಕ್ಷೆ ಸುಮಾ ಅನಂತ್ ಆಶಿಸಿದರು.
ಮದ್ದೂರು ಪಟ್ಟಣದ ಕಮಲಾನೆಹರು ಬಾಲಿಕಾ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಇಂಡೋ-ಜಪಾನ್ ಸ್ನೇಹ ಬಳಗದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಶೈಕ್ಷಣಿಕವಾಗಿ ಮುಂದುವರೆದ ಹೆಣ್ಣು ಮಕ್ಕಳು ಎಲ್ಲ ರಂಗದಲ್ಲಿ ಸ್ಥಾನ ಪಡೆದು ಪುರುಷರಿಗೆ ಸರಿ ಸಮಾನರಾಗಿದ್ದರೂ ಶಿಕ್ಷಣ ವಂಚಿತ ಹೆಣ್ಣು ಮಕ್ಕಳು ಮೌಢ್ಯಗಳಿಗೆ ಕಟ್ಟು ಬಿದ್ದು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಜೀವನದಲ್ಲಿ ಶಿಕ್ಷಣವನ್ನು ಹೊಂದಿದವರು ಯಾರ ಹಂಗೂ ಇಲ್ಲದೆ ಸ್ವಾವಲಂಬಿಗಳಾಗಿ ಬದುಕಬಹುದು. ನಮ್ಮ ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಲು ಹೆಣ್ಣು ಮಕ್ಕಳ ಕೊಡುಗೆ ಅಪಾರ ಎಂಬುದು ಪ್ರಶಂಸನೀಯವಾಗಿದ್ದು, ಭಾರತೀಯ ಸಂಸ್ಕೃತಿಗೆ ಚ್ಯುತಿ ಬಾರದ ರೀತಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಜಪಾನ್ ಮಕ್ಕಳು ಹಾಗೂ ಭಾರತೀಯ ಮಕ್ಕಳಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಕಾರ್ಯದರ್ಶಿ ಸಿ. ಅಪೂರ್ವಚಂದ್ರ, ಶಾಲೆಯ ಮುಖ್ಯ ಶಿಕ್ಷಕ ಎನ್.ಕೃಷ್ಣ, ಇನ್ನರ್ವ್ಹೀಲ್ ಪದಾಧಿಕಾರಿಗಳಾದ ಚಂದ್ರಕಲಾ ಶ್ರೀಹರ್ಷ, ಧನಲಕ್ಷ್ಮೀ ರಾಜೇಶ್, ಭಾಗ್ಯಾ ಪುಟ್ಟಸ್ವಾಮಿ, ಶ್ವೇತಾ ಶಶಿಗೌಡ, ಜ್ಯೋತಿ ಗಿರೀಶ್, ವಸಂತಾ, ಪುಷ್ಪಲತಾ, ಅಶ್ವಿನಿ, ರಶ್ಮಿ, ಸುಷ್ಮಾ ಹಾಗೂ ಇತರರು ಹಾಜರಿದ್ದರು.