ಕೆಜಿಎಫ್: ನಗರದ ಸಲ್ಡಾನಾ ವೃತ್ತದಿಂದ ಆಂಡ್ರಸನ್ಪೇಟೆವರೆಗೆ ಡಬಲ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಗುರುವಾರ ಒತ್ತುವರಿ ತೆರವುಗೊಳಿಸುವ ವೇಳೆ ಸಂಸದ ಎಸ್.ಮುನಿಸ್ವಾಮಿ ಮತ್ತು ಶಾಸಕಿ ಎಂ. ರೂಪಕಲಾ ನಡುವೆ ಮಾತಿನ ಚಕಮಕಿ ನಡೆಯಿತು.
ಸಂಸದ ಮುನಿಸ್ವಾಮಿ ಮಾತನಾಡಿ, ನಗರಸಭೆ, ಲೋಕೋಪಯೋಗಿ, ಬೆಸ್ಕಾಂ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಒತ್ತುವರಿ ಮಾಡಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಹಲವಾರು ಬಾರಿ ಸೂಚಿಸಿದ್ದರೂ ದಾಸ್ ಚಿನ್ನಸವರಿ ಸಹೋದರನಾದ ಸ್ಟೀಫನ್ ಫುಟ್ಪಾತ್ ಅನ್ನೂ ಸೇರಿಸಿಕೊಂಡು ಅಕ್ರಮವಾಗಿ ತಗಡು ಶೀಟ್ಗಳನ್ನು ಕಟ್ಟಡದ ಮುಂದೆ ಕಟ್ಟಿಕೊಂಡು ಡಬಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾನೆ. ಅಭಿವೃದ್ಧಿ ವಿಚಾರದಲ್ಲಿ ದ್ವೇಷ ರಾಜಕಾರಣ ಬೇಡ. ಇಬ್ಬರೂ ಜತೆಯಲ್ಲಿದ್ದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಹೋಗೋಣ. ತೆರವುಗೊಳಿಸುವುದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ. ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲಗೊಳಿಸಲಾಗುತ್ತದೆ. ಇದರಿಂದ ನಗರದ ಸಂಚಾರ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದರು.
ರಸ್ತೆ ಕಾಮಗಾರಿಗೆ ಬಳಸುತ್ತಿರುವುದು ಸರ್ಕಾರದ ದುಡ್ಡು, ನಮ್ಮ ಮನೆಯದ್ದೂ ಅಲ್ಲ, ನಿಮ್ಮ ಮನೆಯದ್ದೂ ಅಲ್ಲ. ನಿಮ್ಮ ಉದ್ದೇಶ ಏನು, ಈಗ ಇರುವ ರಸ್ತೆಗಳನ್ನು ಹಾಗೆಯೇ ಬಿಟ್ಟುಬಿಡಬೇಕೇ? ಎಂದು ಸಂಸದರು ಪ್ರಶ್ನಿಸಿದರು.
ಅವಶ್ಯಕತೆ ಇದ್ದಲ್ಲಿ ಕಾಮಗಾರಿ: ಶಾಸಕಿ ರೂಪಕಲಾ ಉತ್ತರಿಸಿ, ಮುಖ್ಯಮಂತ್ರಿ ಬಳಿ 50 ಕೋಟಿ ರೂಪಾಯಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 50 ಕೋಟಿ ನೀಡಲು ಸಾಧ್ಯವಿಲ್ಲ ಎಂದು 25 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಬೆಮೆಲ್ನ ಆಲದಮರದ ಬಳಿಯಿಂದ ಕಾಮಗಾರಿ ನಡೆಯುತ್ತಿದೆ. ಸಲ್ಡಾನಾ ವೃತ್ತದಿಂದ ಆಂಡ್ರರ್ಸನ್ಪೇಟೆವರೆಗೆ, ಕೋರ್ಟ್ ಬಳಿ, ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಡಬಲ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಹೊಟ್ಟೆಪಾಡಿಗೆ ಚಿಕನ್ ಅಥವಾ ಮಟನ್, ಸೈಕಲ್ ಪಂಚರ್ ಅಂಗಡಿಗಳನ್ನಿಟ್ಟುಕೊಂಡು ಬದುಕುತ್ತಿದ್ದಾರೆ. ಅವರ ಅಂಗಡಿಗಳನ್ನು ನೋಟಿಸ್ ನೀಡದೇ ಏಕಾಏಕಿ ತೆರವುಗೊಳಿಸುವುದು ಎಷ್ಟು ಸರಿ? ಕೆಲವು ಮೈನಿಂಗ್ ಏರಿಯಾಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಮಾಡುವುದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ನೀವು ಅನುದಾನವನ್ನು ತಂದು ಅಭಿವೃದ್ಧಿ ಮಾಡುತ್ತೇನೆ ಎಂದರೆ ಸ್ವಾಗತಿಸುತ್ತೇನೆ ಎಂದರು.
ಗಮನಕ್ಕೆ ತರದೆ ತೆರವಿಗೆ ಹೇಗೆ ಮುಂದಾದಿರಿ: ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದು ಸತ್ಯ. ಎಲ್ಲಿ, ಎಷ್ಟು ಅವಶ್ಯಕತೆಯಿದೆಯೋ ಅಲ್ಲಲ್ಲಿ ಮಾತ್ರ ಅನುದಾನ ವಿನಿಯೋಗಿಸಲಾಗುತ್ತಿದೆ. ಇದರಿಂದ ತೊಂದರೆಯಾಗಿರುವುದಾದರೂ ಏನು? ನನ್ನ ಅನುಪಸ್ಥಿತಿಯಲ್ಲಿಯೇ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ? ಸ್ಥಳಿಯ ಶಾಸಕಿಯಾಗಿದ್ದರೂ ಸೌಜನ್ಯಕ್ಕೂ ಒತ್ತುವರಿ ತೆರವುಗೊಳಿಸುವ ಬಗ್ಗೆ ನನ್ನ ಗಮನಕ್ಕೆ ತರದೇ ನಿರ್ಧಾರ ಕೈಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. ಸರ್ಕಾರದಿಂದ ಅನುದಾನ ತರುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ನಿಮಗೆ ಗೊತ್ತಿದೆ. ಯಾರೋ ನಿಮಗೆ ಮಿಸ್ಗೈಡ್ ಮಾಡಿದ್ದಾರೆ. ಎಲ್ಲ ೇತ್ರಗಳಿಗೆ ನೀಡಿದಂತೆ 25 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿದ್ದು, ಅದರಲ್ಲಿ ಶೇ .90 ಅನುದಾನವನ್ನು ಆಲದಮರದಿಂದ ಆಂಡರ್ಸನ್ಪೇಟೆವರೆಗೆ ಎಲ್ಲೆಲ್ಲಿ ಡಬಲ್ ರಸ್ತೆ ಬರಬೇಕು ಎನ್ನುವುದೆಲ್ಲ ಮೊದಲೇ ನೀಲಿ ನಕಾಶೆ ಸಿದ್ಧಪಡಿಸಿ ಕಾಮಗಾರಿ ನಡೆಸಲಾಗುತ್ತಿದ್ದು, ಈ ಬಗ್ಗೆ ನಿಮಗೆ ಸಂಬಂಧಪಟ್ಟವರು ತಿಳಿಸಬೇಕಿತ್ತು ಎಂದು ಶಾಸಕಿ ಹೇಳಿದರು.
ಫುಟ್ ಪಾತ ತೆರವು: ಕಾಂಗ್ರೆಸ್ ಯುವ ಟಕದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಬೆನಿಟೋಗೆ ಸೇರಿದ ಸಮುದಾಯ ಭವನದ ಮುಂಭಾಗ ಒತ್ತುವರಿ ತೆರವುಗೊಳಿಸುತ್ತಿದ್ದಾಗ ಆಕ್ರೋಶದಿಂದ ಬಂದ ಬೆನಿಟೋ ಸಂಸದ ಎಸ್. ಮುನಿಸ್ವಾಮಿಗೆ ನೀವು ಏನು ದಬ್ಬಾಳಿಕೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮುನಿಸ್ವಾಮಿ ಸ್ಥಳದಲ್ಲೇ ನಿಂತು ಸಮುದಾಯ ಭವನದ ಮುಂಭಾಗದ ಫುಟ್ಪಾತ್ ತೆರವುಗೊಳಿಸಿದರು.