ದಾವಣಗೆರೆ: ನಗರದಲ್ಲೆಡೆ ಶನಿವಾರ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿತ್ತು. ವೆಂಕಟೇಶ್ವರ ದೇಗುಲಗಳಲ್ಲಿ ಇಡೀ ದಿನ ಗೋವಿಂದ ನಾಮಾವಳಿ ಪಠಿಸಲಾಯಿತು.
ವೆಂಕಟೇಶ್ವರ ಸ್ವಾಮಿ-ಪದ್ಮಾವತಿ ದೇವಿಯನ್ನು ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ದೇಗುಲಗಳಿಗೆ ವಿದ್ಯುತಲಂಕಾರ ಮಾಡಲಾಗಿತ್ತು. ನಸುಕಿನಿಂದಲೇ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಮಂಗಳಸ್ನಾನ, ತುಳಸಿ ಅರ್ಚನೆ, ಮಹಾ ಮಹಾಮಂಗಳಾರತಿ ಬಳಿಕ ವೈಕುಂಠ ಬಾಗಿಲು ತೆರೆಯಲಾಯಿತು. ಭಕ್ತರು ಸರದಿ ಸಾಲಿನಲ್ಲಿ ತೆರಳಿ, ವೈಕುಂಠ ದ್ವಾರದ ದರ್ಶನ ಪಡೆದರು.
ಎಂಸಿಸಿ ಬಿ ಬ್ಲಾಕ್ನ ಎಂಸಿಸಿ ಬಿ ಬ್ಲಾಕ್ನ ಲಕ್ಷ್ಮೀ ವೆಂಕಟೇಶ್ವರ, ಬೇತೂರು ರಸ್ತೆಯ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಬೆಳಗ್ಗಿನಿಂದಲೇ ಭಕ್ತರ ಸಂದಣಿ ಕಂಡುಬಂದಿತು. ಅಣಜಿ ಗೊಲ್ಲರಹಳ್ಳಿಯ ದೇವಸ್ಥಾನದಲ್ಲೂ ಅಖಂಡ ದರ್ಶನ ಅವಕಾಶ ನೀಡಲಾಯಿತು. ಯರವನಾಗ್ತಿಹಳ್ಳಿ ಕ್ಯಾಂಪ್ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜೆ ನಡೆದವು. ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಪುರದಲ್ಲಿ ಶ್ರೀದೇವಿ ದೇವಿ ಭೂದೇವಿ ಸಹಿತ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
—