ಕಕಮರಿ: ಗ್ರಾಮದ ಶಕ್ತಿ ದೇವತೆ ಅಮ್ಮಾಜೇಶ್ವರಿ ಜಾತ್ರೆ ಶುಕ್ರವಾರ ಅತಿ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ 6 ಗಂಟೆಗೆ ದೇವಿ ರುಧ್ರಾಭಿಷೇಕ, ಪೂಜೆ ಜರುಗಿತು. ಬೆಳಗ್ಗೆ 9 ಗಂಟೆಗೆ ಶ್ರೀ ಅಮ್ಮಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಐನಾಪುರ ಅಕ್ಕಮಹಾದೇವಿ ಭಜನಾ ಮಂಡಳಿ ಹಾಗೂ ಟಾಕಳಿಯ ಜೈ ಹನುಮಾನ ಭಜನಾ ಮಂಡಳಿಯಿಂದ ಸುಪ್ರಸಿದ್ಧ ಭಜನಾ ಪದಗಳು ಜರುಗಿದವು.
ಜಾತ್ರೆ ನಿಮಿತ್ತ ಗುರುವಾರ ರಾತ್ರಿ ಸ್ಥಳೀಯ ಶ್ರೀ ಕಾಕುದೇವಿ ನಾಟ್ಯ ಸಂಘದಿಂದ ಗರತಿ ಹೆಣ್ಣಿಗೆ ಗರ್ವದ ಗಂಡ ನಾಟಕವನ್ನು ಏರ್ಪಡಿಸಲಾಗಿತ್ತು. ಅಭಿನವ ಗುರುಲಿಂಗಜಂಗಮ ಸ್ವಾಮೀಜಿ ಹಾಗೂ ಗೋಕಾಕನ ಲಕ್ಷ್ಮೀ ಎಜ್ಯುಕೇಶನ್ ಸೊಸೈಟಿ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ನಾಟಕವನ್ನು ಉದ್ಘಾಟಿಸಿದರು. ವಿಜುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗಜಾನನ ಮಂಗಸೂಳಿ, ಮಾಜಿ ಶಾಸಕ ಶಹಾಜಹಾನ್ ಡೊಂಗರಗಾಂವ, ಗ್ರಾಪಂ ಅಧ್ಯಕ್ಷ ಹನುಮಂತ ಕಾಂಬಳೆ, ವೆಂಕನಗೌಡ ಪಾಟೀಲ, ಗಿರೀಶ ಬಸರಗಿ, ಶ್ರೀಕಾಂತ ಪೂಜಾರಿ, ರಮೇಶ ಸಿಂದಗಿ, ಸಿಕಂದರ್ ಮುಜಾವರ್, ಸಿದ್ದಾರ್ಥ ಶಿಂಗೆ, ವಿಜಯಪುರ ಸಿಪಿಐ ಬಸವರಾಜ ಬಿಸನಕೊಪ್ಪ, ಐಗಳಿ ಪಿಎಸ್ಐ ಶಿವಾಜಿ ಪವಾರ, ಅಥಣಿ ಇಒ ವೀರಣ್ಣ ವಾಲಿ, ಸಹಜಾನಂದ ಬಸರಗಿ, ಬಸವರಾಜ ಚಮಕೇರಿ ಮುಂತಾದವರು ಪಾಲ್ಗೊಂಡಿದ್ದರು.
ಜಾತ್ರೆ ಅಂಗವಾಗಿ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಜತ್ತ ತಾಲೂಕಿನ ತುರ್ತ ಆಸಂಗಿ ಗ್ರಾಮದ ಅಪ್ಜಲ್ಖಾನ್ ಮುಜಾವರ 100 ಕೆಜಿ ಕಲ್ಲು ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದು ನೋಡುಗರ ಹುಬ್ಬೆರುವಂತೆ ಮಾಡಿದರು. ಸಿಕಂದರ್ ಮಜಾವರ್ 84 ಕೆಜಿ ಕಲ್ಲು ಎತ್ತುವ ಮೂಲಕ ದ್ವಿತೀಯ, ರಪಿಕ್ ಮುಲ್ಲಾ 75 ಕೆಜಿ ಕಲ್ಲು ಎತ್ತುವ ಮೂಲಕ ತೃತೀಯ ಬಹಮಾನ ಪಡೆದರು.