ಕಾರವಾರ/ಸಿದ್ದಾಪುರ : ಒಂದೆಡೆ ಬಿಎಸ್ಎನ್ಎಲ್ ನಷ್ಟದಲ್ಲಿ ಬಿದ್ದು ಸಂಕಷ್ಟದಲ್ಲಿದೆ. ಈ ನಡುವೆ ಕೆಲವು ಅಧಿಕಾರಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಗ್ರಾಹಕರಿಗೆ ಹಾಗೂ ನಿಗಮಕ್ಕೆ ವಂಚಿಸುತ್ತಿರುವ ಆರೋಪ ಕೇಳಿಬಂದಿದೆ.
ಸಿದ್ದಾಪುರ ತಾಲೂಕಿನಲ್ಲಿ ಬಿಎಸ್ಎನ್ಎಲ್ ಅಧಿಕಾರಿಯೊಬ್ಬ ತಮ್ಮ ಪತ್ನಿಯ ಹೆಸರಿನಲ್ಲಿ ಹೇರೂರು, ಹೆಗ್ಗರಣಿ, ಕಾನಗೋಡ ಭಾಗದ ಫೈಬರ್ ಟು ದ ಹೋಮ್ (ಎಫ್ಟಿಟಿಎಚ್) ಪ್ರಾಂಚೈಸಿ ಪಡೆದಿರುವುದು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಗಳಿಂದ ತಿಳಿದುಬಂದಿದೆ. ಅಲ್ಲದೆ, ಪ್ರಾಂಚೈಸಿಗೆ ಲಾಭ ಮಾಡಿಕೊಡುವ ಸಲುವಾಗಿ ಗ್ರಾಹಕರಿಗೆ ಸರಿಯಾಗಿ ಸೇವೆ ನೀಡದೇ ವಂಚಿಸುತ್ತಿರುವ ಆರೋಪ ಕೇಳಿ ಬಂದಿದೆ.
ಸಿದ್ದಾಪುರ ತಾಲೂಕಿನ ಹಲವು ಹಳ್ಳಿಗಳು ಗುಡ್ಡಗಾಡು ಪ್ರದೇಶದಲ್ಲಿವೆ. ಅಲ್ಲಿಗೆ ಸದ್ಯ ಬಿಎಸ್ಎನ್ಎಲ್ ಮಾತ್ರ ಸಂಪರ್ಕ ಸಾಧನ. ಆದರೆ, ಅಧಿಕಾರಿಗಳ ಅತ್ಯಂತ ಕಳಪೆ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಅಲ್ಲಿನ ಹೆಚ್ಚಿನ ಸ್ಥಿರ ದೂರವಾಣಿ ಮಾರ್ಗಗಳು ಈಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಂದು ದಿನ ಸರಿ ಇದ್ದರೆ ಇನ್ನೆರಡು ದಿನ ಬಂದಾಗಿರುತ್ತವೆ. ಮೊಬೈಲ್ ಫೋನ್ಸಂಪರ್ಕ ಸರಿಯಾಗಿ ಸಿಗುವುದಿಲ್ಲ. ಇಂದರಿಂದ ಮಳೆಗಾಲ ಬಂತು ಎಂದರೆ ಈ ಗ್ರಾಮಗಳು ಹೊರ ಜಗತ್ತಿನ ಸಂಪರ್ಕವನ್ನು ಅಕ್ಷರಶಃ ಕಡಿದುಕೊಳ್ಳುತ್ತವೆ.
ಗ್ರಾಹಕರಿಂದ ಹಣ ಸಂಗ್ರಹ: ಬಿಎಸ್ಎನ್ಎಲ್ ಈ ಸಮಸ್ಯೆಗಳನ್ನು ತಪ್ಪಿಸಲು ಹಾಗೂ ವೇಗದ ಇಂಟರ್ನೆಟ್ ಒದಗಿಸಲು ಎಫ್ಟಿಟಿಎಚ್ ಸೇವೆ ಆರಂಭಿಸಿದೆ.ಈ ಸೇವೆಯನ್ನು ಒದಗಿಸುವ ಜವಾಬ್ದಾರಿಯನ್ನು ಹೊರ ಗುತ್ತಿಗೆ ಸಂಸ್ಥೆಗಳಿಗೆ ಒದಗಿಸಲಾಗಿದೆ. ಬಿಎಸ್ಎನ್ಎಲ್ ಹಾಗೂ ಪ್ರಾಂಚೈಸಿಗಳ ನಡುವೆ ಆದ ಒಪ್ಪಂದದಂತೆ ಪ್ರಾಂಚೈಸಿಗಳು ಗ್ರಾಹಕರಿಂದ ಮೋಡೆಮ್ ಠೇವಣಿ ಮಾತ್ರ ಪಡೆಯಬೇಕು. ಕೇಬಲ್ ಅಳವಡಿಕೆ ಖರ್ಚನ್ನು ಬಿಎಸ್ಎನ್ಎಲ್ ಭರಿಸುತ್ತದೆ. ಆದರೆ, ಪ್ರಾಂಚೈಸಿಗಳು ಗ್ರಾಹಕರನ್ನು ಕತ್ತಲೆಯಲ್ಲಿಟ್ಟು ಗ್ರಾಹಕರಿಂದ ಕೇಬಲ್ಗಾಗಿ ಹಣ ಸಂಗ್ರಹಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ವಿವಿಧೆಡೆ ಕೋವಿಡ್ ಕಾರಣಕ್ಕೆ ಬೆಂಗಳೂರಿನಲ್ಲಿದ್ದ ಈ ಭಾಗದ ಹಲವು ಜನ ಊರಿಗೆ ಆಗಮಿಸಿದ್ದಾರೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತುರ್ತು ನೆಟ್ವರ್ಕ್ ಅವಶ್ಯಕತೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿಗಳು ಗ್ರಾಹಕರಿಂದ ಹಣ ಕೀಳುತ್ತಿದ್ದಾರೆ. ಜನ ತಮ್ಮ ಸ್ಥಿರ ದೂರವಾಣಿ ಸಮಸ್ಯೆ ಹೇಳಲು ಹೋದರೆ, ಸ್ಪಂದಿಸದ ಅಧಿಕಾರಿ ಎಫ್ಟಿಟಿಎಚ್ ಲೈನ್ ಪಡೆಯಿರಿ ಎಂದು ಪುಸಲಾಯಿಸುತ್ತಾರೆ ಎಂಬುದು ಇಲ್ಲಿನ ಹಲವು ಗ್ರಾಮಗಳ ಜನರ ದೂರು.
ನಮ್ಮ ಮನೆಯ ಫೋನ್ ಇಂಟರ್ನೆಟ್ ಸಮಸ್ಯೆ ಹೇಳಲು ಹೋದರೆ ಎಫ್ಟಿಟಿಎಚ್ ಪಡೆಯಿರಿ ಎಂದು ಅಧಿಕಾರಿ ಪ್ರೇರೇಪಿಸುತ್ತಾರೆ. ಇಲಾಖೆ ವಾಹನದಲ್ಲಿ ಓಡಾಡುತ್ತಾ, ಸರ್ಕಾರದ ವೇತನ ಪಡೆದು, ತಮ್ಮ ಪತ್ನಿಯ ಹೆಸರಿನ ಖಾಸಗಿ ಪ್ರಾಂಚೈಸಿ ಪಡೆದುಕೊಂಡು ಅದಕ್ಕಾಗಿ ಕೆಲಸವನ್ನು ಮಾಡುತ್ತಿದ್ದಾರೆ.
| ಮಂಜುನಾಥ ಹೆಗಡೆ, ಸಿದ್ದಾಪುರ ತಾಲೂಕಿನ ಬಿಎಸ್ಎನ್ಎಲ್ ಗ್ರಾಹಕ
ಎಫ್ಟಿಟಿಎಚ್ ಸೇವೆಯನ್ನು ಹೊರ ಗುತ್ತಿಗೆ ನೀಡಲಾಗಿದೆ. ಈ ಹಿಂದೆ ಅಧಿಕಾರಿಗಳ ಸಂಬಂಧಿಕರೂ ಗುತ್ತಿಗೆ ಪಡೆಯಲು ಅವಕಾಶವಿತ್ತು. ಈಗ ನಿಯಮಾವಳಿಯಲ್ಲಿ ಬದಲಾವಣೆಯಾಗಿದ್ದು, ಸಿದ್ದಾಪುರ ಹೆಗ್ಗರಣಿ ಭಾಗದಲ್ಲಿ ಅಧಿಕಾರಿಯ ಪತ್ನಿ ಪಡೆದ ಎಫ್ಟಿಟಿಎಚ್ ಪ್ರಾಂಚೈಸಿಯನ್ನು ಬದಲಾಯಿಸಲು ಕ್ರಮ ವಹಿಸಲಾಗಿದೆ.
| ರವಿಕಿರಣ ವಿ.ಜನ್ನು , ಡಿಜಿಎಂ, ಬಿಎಸ್ಎನ್ಎಲ್, ಉತ್ತರ ಕನ್ನಡ