ಗುಂಡೆವಾಡಿ/ಸಂಬರಗಿ: ಶಾಸಕ ಶ್ರೀಮಂತ ಪಾಟೀಲ ಅವರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಜತ್ತ-ಜಾಂಬೋಟಿ ರಸ್ತೆ ತಡೆದು ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.
ಪಿ.ಎ.ನಾಗನೂರ ಗ್ರಾಮದ ಬಸಗೌಡ ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರ ರಚನೆಯಲ್ಲಿ ಶ್ರೀಮಂತ ಪಾಟೀಲರ ತ್ಯಾಗ ಹಾಗೂ ಶ್ರಮ ಅಪಾರ. ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ್ದರೂ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ರಾಜೀನಾಮೆ ನೀಡಿ ಬಿ.ಎಸ್. ಯಡಿಯೂರಪ್ಪ ಅವರ ಬೆನ್ನಿಗೆ ನಿಂತರು. ಆದರೆ, ಈಗ ನೂತನ ಸಚಿವ ಸಂಪುಟದಲ್ಲಿ ಅವರನ್ನು ಕಡೆಗಣಿಸಲಾಗಿದೆ. ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಯಾವುದೇ ಭ್ರಷ್ಟಾಚಾರಗಳಿಗೆ ಆಸ್ಪದ ನೀಡದೆ ಕ್ಷೇತ್ರದ ಅಭಿವೃದ್ಧಿಗೆ ಪಾಟೀಲರು ಸ್ಪಂದಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಶ್ರೀಮಂತ ಪಾಟೀಲ ಅವರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.
ಬಿಜೆಪಿ ಮುಖಂಡ ಮಹೇಶ ನಾಯಿಕ ಮಾತನಾಡಿ, ಶಾಸಕ ಶ್ರೀಮಂತ ಪಾಟೀಲ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡದಿದ್ದರೆ ಬೆಂಗಳೂರಿನಲ್ಲಿ ತೀವ್ರ ಪ್ರತಿಭಟನೆ ಆಯೋಜಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಲಾಯಿತು. ರಾಜು ಚವ್ಹಾಣ, ರಾಮಗೌಡ ಪಾಟೀಲ, ಸಂಭಾಜಿ ವೀರ, ಈರಪ್ಪ ಗೋಲಬಾವಿ, ಗೌಡಪ್ಪ ದರೂರ, ಮಹಾಂತೇಶ ಮಿರ್ಜಿ, ಅಣ್ಣಾಸಾಹೇಬ ಈಮಗೌಡರ, ಫೀರಸಾಬ್ ಮುಲ್ಲಾ ಇತರರಿದ್ದರು.