ತೆಲಸಂಗ, ಬೆಳಗಾವಿ: ದಾನ ಪ್ರವೃತ್ತಿಯಿಂದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಬಸವಣ್ಣನವರಿಂದ ದಾನಮ್ಮಳೆಂದು ಹೆಸರು ಪಡೆದ ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂದು ಸೋಲಾಪುರ ಸಂಸದ ಡಾ.ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ನಿಮಿತ್ತ ಮಂಗಳವಾರ ಅನ್ನಪ್ರಸಾದ ಸೇವೆಗೆ ಚಾಲನೆ ನೀಡಿ ಮಾತನಾಡಿ, 12ನೇ ಶತಮಾನದ ಶರಣೆ ದಾನಮ್ಮಳ ಜೀವನಚರಿತ್ರೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಸಮಾಜದಲ್ಲಿ ಅವಶ್ಯಕತೆ ಇರುವವರಿಗೆ ದಾನ ಮಾಡುವ ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪುಣ್ಯಕ್ಷೇತ್ರಕ್ಕೆ ಬಂದು ನಮಿಸಿದರೆ ಸಾಲದು. ಜೀವನದಲ್ಲಿ ಬೇಡವಾದವುಗಳನ್ನು ತ್ಯಜಿಸಿದರೆ ತಾಯಿ ದಾನಮ್ಮನ ಕೃಪೆಗೆ ಪಾತ್ರರಾಗುತ್ತೀರಿ ಎಂದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಸಿದ್ದಯ್ಯ ಹಿರೇಮಠ ಮಾತನಾಡಿ, ಕರ್ನಾಟಕದ ಹಲವು ಜಿಲ್ಲೆಗಳಿಂದ ಕಾಲ್ನಡಿಗೆಯಲ್ಲಿಯೇ ಬರುವ ಲಕ್ಷಾಂತರ ಭಕ್ತರ ಆರಾಧ್ಯದೇವತೆ ದಾನಮ್ಮಳ ಭಕ್ತರ ಸೇವೆ ನಿಜಕ್ಕೂ ಮಾದರಿ ಆಗಿದೆ. ಇದು ಕಷ್ಟದಲ್ಲಿ ಇದ್ದವರಿಗೆ ದಾನ ಮಾಡುವ ಪರಂಪರೆ ಎತ್ತಿ ಹಿಡಿಯುತ್ತದೆ ಎಂದರು.
ದೇವಸ್ಥಾನದ ಟ್ರಸ್ಟಿಗಳಾದ ಚಂದ್ರಶೇಖರ ಗೊಬ್ಬಿ, ಪ್ರಕಾಶ ಗಣಿ, ಸದಾಶಿವ ಗೊಡ್ಡೋಡಗಿ, ಸಂತೋಷ ಪೂಜಾರಿ, ರೋಹನ ಗಾಡ್ವೆ, ಯಾತ್ರಾ ಸಮಿತಿ ಅಧ್ಯಕ್ಷ ಸೋಮಶಂಕರ ಪೂಜಾರಿ, ಪ್ರಸಾದ ಪೂಜಾರಿ, ಕಾರ್ಯದರ್ಶಿ ವಿಠ್ಠಲ ಪೂಜಾರಿ ಇತರರು ಇದ್ದರು.