ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತ ಉಂಟಾಗಿದ್ದ ಸಕಲೇಶಪುರ ತಾಲೂಕು ಶಿರಾಡಿ ಘಾಟ್ ಮಾರ್ಗದಲ್ಲಿ ಎಲ್ಲಾ ರೀತಿಯ ಬಸ್ಗಳ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ.
ಈ ಮೊದಲು ಶಿರಾಡಿ ಘಾಟ್ ಮಾರ್ಗದ ದೋಣಿಗಲ್ನಿಂದ ಮಾರನಹಳ್ಳಿವರೆಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಾಜಹಂಸ, ಐರಾವತ ಬಸ್ಗಳು ಸೇರಿದಂತೆ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಬಹುತೇಕ ಪ್ರಯಾಣಿಕರು ಬೆಂಗಳೂರು-ಮಂಗಳೂರು ದೂರದ ಪ್ರಯಾಣಕ್ಕೆ ಅಂಬಾರಿ ಡ್ರೀಮ್ ಕ್ಲಾಸ್ ಸ್ಲೀಪರ್, ನಾನ್ ಎಸಿ ಸ್ಲೀಪರ್, ಸ್ಕಾೃನಿಯಾ ಮತ್ತು ಮಲ್ಟಿ ಅಕ್ಸೆಲ್ ವೋಲ್ವೊ ಬಸ್ಗಳನ್ನು ಅವಲಂಬಿಸಿರುವುದರಿಂದ ಈ ವಾಹನಗಳ ಸಂಚಾರಕ್ಕೆ ಮನವಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
ಈ ವಾಹನಗಳು ಸಹ 20 ಟನ್ ಗಿಂತ ಕಡಿಮೆ ತೂಕ ಹೊಂದಿರುವುದರಿಂದ ಶಿರಾಡಿ ಮಾರ್ಗದಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.