ಬೀದರ್: ಶಿಕ್ಷಕ ವೃತ್ತಿಗೆ ಸರಿಸಾಟಿ ಯಾವುದೂ ಇಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ್ ಹೇಳಿದರು.
ಬೀದರ್ ತಾಲ್ಲೂಕಿನ ಹಮಿಲಾಪುರ ಗ್ರಾಮದ ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಸೇರಿದಂತೆ ಎಲ್ಲರ ನಿರ್ಮಾಪಕರು ಶಿಕ್ಷಕರೇ ಆಗಿರುತ್ತಾರೆ ಎಂದು ತಿಳಿಸಿದರು.
ಶಿಕ್ಷಕ ವೃತ್ತಿಯಲ್ಲಿ ಇರುವವರು ಕಲಿಕೆಯನ್ನು ನಿಲ್ಲಿಸಬಾರದು. ಹೊಸ ಹೊಸ ಸಂಗತಿಗಳನ್ನು ಅರಿತುಕೊಳ್ಳಬೇಕು. ಬೋಧನಾ ಕೌಶಲ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸರ್ವಪಲ್ಲಿ ರಾಧಾಕೃಷ್ಣನ್, ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ವೇಷ ಧರಿಸಿದ್ದ ಮಕ್ಕಳು ಎಲ್ಲರ ಗಮನ ಸೆಳೆದರು.
ಶಾಲೆಯ ಸಂಸ್ಥಾಪಕಿ ಶಾರದಬಾಯಿ ರಾಂಪುರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಂ.ಡಿ. ಮುಜಮ್ಮಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ, ಬಿಆರ್ಸಿ ಸಮನ್ವಯಾಧಿಕಾರಿ ವಿಜಯಕುಮಾರ ಬೆಳಮಗಿ, ಸಿಆರ್ಪಿ ಮಾಣಿಕರಾವ್ ಪವಾರ್ ಮಾತನಾಡಿದರು.
ಶಾಲೆಯ ಅಧ್ಯಕ್ಷ ಮಹೇಶ ರಾಂಪುರೆ, ಮುಖ್ಯಶಿಕ್ಷಕಿ ಅಂಬಿಕಾ ವಿ. ರಾಂಪುರೆ, ಶಿಕ್ಷಕಿಯರಾದ ನಿಕಿತಾ ಕುಂದೆ, ತ್ರಿವೇಣಿ ಜಮಗೆ, ಪ್ರಿಯಾ ದೇವದುರ್ಗ, ನಂದಿನಿ, ಶ್ರುತಿ, ಸುನಿತಾ, ಸಿಬ್ಬಂದಿ ಸಂಗೀತಾ, ಆಕಾಶ, ದಿನೇಶ ಸೋನಿ ಇದ್ದರು. ಪ್ರಾಚಾರ್ಯೆ ಶೈಲಜಾ ಡಿ. ಗುಪ್ತಾ ನಿರೂಪಿಸಿದರು. ಮೀನಾಕ್ಷಿ ಪಾಟೀಲ ವಂದಿಸಿದರು.