ಶಿಕಾರಿಪುರ: ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ಉಡುಗಣಿ ಕ್ಷೇತ್ರದ ಬಿಜೆಪಿ ಸದಸ್ಯ ಕೆ.ಪ್ರಕಾಶ್ ಅವಿರೋಧ ಆಯ್ಕೆಯಾದರು.
ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕೆ. ಪ್ರಕಾಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆ ಘೊಷಣೆ ಮಾಡಲಾಯಿತು. ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಇದುವರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಮೂವರಿಗೆ ಅವಕಾಶ ಕಲ್ಪಿಸಲಾಗಿದ್ದು, ಈಗ ಅಧ್ಯಕ್ಷ ಸ್ಥಾನಕ್ಕೆ ನಾಲ್ಕನೇಯವರಾಗಿ ಕೆ. ಪ್ರಕಾಶ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರೇಮಾ ಲೋಕೇಶ್ ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಪಕ್ಷದಲ್ಲಿ ಆಗಿರುವ ಆಂತರಿಕ ಒಪ್ಪಂದದ ಪ್ರಕಾರ ಸದಸ್ಯರಿಗೆ ಅಧಿಕಾರದ ಅವಕಾಶ ಕಲ್ಪಿಸಲಾಗುತ್ತಿದೆ.
ನೂತನ ಅಧ್ಯಕ್ಷ ಉಡುಗಣಿ ಪ್ರಕಾಶ್ ಮಾತನಾಡಿ, ಹೊಸ ಅಧಿಕಾರ ನನಗೆ ಹೆಚ್ಚಿನ ಜವಾಬ್ದಾರಿ ತಂದಿದೆ. ಎಲ್ಲ ಸದಸ್ಯರ ಸಹಕಾರ, ಮಾರ್ಗದರ್ಶನ ಪಡೆದು ಆಡಳಿತ ನಡೆಸುತ್ತೇನೆ. ಸಾಮಾನ್ಯನಾದ ನನ್ನನ್ನು ಗುರುತಿಸಿ ಅಧಿಕಾರ ನೀಡಿದ ಮುಖ್ಯಮಂತ್ರಿಗಳಿಗೆ ಮತ್ತು ಸಂಸದರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದರು.
ಪರಮೇಶ್ವರಪ್ಪ, ಕವಲಿ ಸುಬ್ರಹ್ಮಣ್ಯ, ಆರ್.ಕೆ.ಶಂಭು, ಪ್ರೇಮಾ ಲೋಕೇಶ್, ಮಮತಾ ರಾಜಪ್ಪ, ರೂಪಾ ದಯಾನಂದ್ ಸದಸ್ಯರು ಇದ್ದರು. ಇಒ ಪರಮೇಶ್ ಇದ್ದರು.
ಇದು ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ್ದರಿಂದ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಮಾದರಿ ಆಡಳಿತ ನೀಡಲು ಪ್ರಯತ್ನಿಸುತ್ತೇನೆ.
| ಉಡುಗಣಿ ಪ್ರಕಾಶ್, ತಾಪಂ ನೂತನ ಅಧ್ಯಕ್ಷ