ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಕರೊನಾ ಹರಡದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಕರೊನಾ ಬಗ್ಗೆ ಎಚ್ಚರಿಕೆ ವಹಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳಿಗೆ ವರ್ಚುವಲ್ ಸಭೆ ಮಾಡಿ ಸೂಚಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರೊನಾ ಆರ್ಟಿಪಿಸಿಆರ್ ಪರೀಕ್ಷಾ ವರದಿ ವಿಳಂಬವಾಗುತ್ತಿದ್ದು ತ್ವರಿತವಾಗಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಜಿಲ್ಲೆಯ ಕೆಲ ಸಂಚಾರಿ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಮತ್ತು ನರ್ಸ್ಗಳ ಅಭಾವವಿದೆ. ಕೂಡಲೇ ಸಿಬ್ಬಂದಿ ನೇಮಕ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರು ಮೃತಪಟ್ಟ ನಂತರ ಆಂಬುಲೆನ್ಸ್ ಮೂಲಕ ಮೃತದೇಹ ರವಾನಿಸಲು ಹಣ ವಸೂಲಿ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಗಡಿ ಗ್ರಾಮಗಳ ಜನರು ಸಿಟಿಸ್ಕಾೃನ್ ಮಾಡಿಸಲು ಹೆಚ್ಚಾಗಿ ಕೊಲ್ಲಾಪುರ, ಸಾಂಗಲಿಗೆ ಹೋಗುತ್ತಿದ್ದಾರೆ. ಹೀಗಾಗಿ, ರೋಗಿಗಳ ನಿಖರ ಮಾಹಿತಿ ಮತ್ತು ಪಾಸಿಟಿವ್ ಸಂಖ್ಯೆ ತಿಳಿಯುತ್ತಿಲ್ಲ.
ಸಮನ್ವಯಕಾರರ ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ವಿವರ, ಬೆಡ್ಗಳ ಸಂಖ್ಯೆ, ವೆಂಟಿಲೆಟರ್ ಸಂಖ್ಯೆ, ಆಕ್ಸಿಜನ್ ಬೆಡ್ ಸಂಖ್ಯೆ, ತಾಲೂಕು ಆಡಳಿತದ ಅಧಿಕಾರಿಗಳ ಮೊಬೈಲ್ ಸಂಖ್ಯೆ ನೀಡುವಂತೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಸೂಚಿಸಿದ್ದೇನೆ. ಗ್ರಾಪಂ ವ್ಯಾಪ್ತಿಯ ವಾರ್ ರೂಂ 24್ಡ7 ಕ್ರಿಯಾಶೀಲಗೊಳಿಸುವಂತೆ ಸಹ ತಾಕೀತು ಮಾಡಲಾಗಿದೆ. ವ್ಯವಸ್ಥೆ ಸುಧಾರಣೆಗೆ ನೀವೂ ಅಗತ್ಯ ಕ್ರಮಕ್ಕೆ ಮುಂದಾಗಿ ಎಂದು ಅವರು ಒತ್ತಾಯಿಸಿದರು.