ಕಾರವಾರ: ಜಿಲ್ಲೆಯ ಬಹು ದಿನದ ಬೇಡಿಕೆಯಾಗಿದ್ದ ವೆಂಟಿಲೇಟರ್ ಹೊಂದಿರುವ ಆಂಬುಲೆನ್ಸ್ಗಳು ಕ್ಷೇತ್ರಕ್ಕೆ ಲಭ್ಯವಾಗಿದ್ದು, ಸಮಾಧಾನ ತಂದಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಕಾರವಾರ, ಅಂಕೋಲಾ ಕ್ಷೇತ್ರಕ್ಕೆ 2018 ಹಾಗೂ 2019 ರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 4 ಆಂಬುಲೆನ್ಸ್ಗಳನ್ನು ಖರೀದಿಸಿದ್ದು, ಶುಕ್ರವಾರ ಪೂಜೆ ಸಲ್ಲಿಸಿ, ಕ್ರಿಮ್್ಸ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿ, ಮಾತನಾಡಿದರು.
ಗಂಭೀರ ಆರೋಗ್ಯ ಸಮಸ್ಯೆ ಅಥವಾ ಅಪಘಾತಕ್ಕೊಳಗಾದವರನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸಾಗಿಸಲು ವೆಂಟಿಲೇಟರ್ ಇರುವ ಆಂಬುಲೆನ್ಸ್ ಬೇಕಾಗುತ್ತದೆ. ಆದರೆ, ಜಿಲ್ಲೆಯಲ್ಲಿ ಒಂದೂ ವೆಂಟಿಲೇಟರ್ ಇರುವ ಆಂಬುಲೆನ್ಸ್ ಇರಲಿಲ್ಲ. ಇದರಿಂದ ಹಲವು ರೋಗಿಗಳು ಉನ್ನತ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದರು. ಇದನ್ನು ಮನಗಂಡು ನನ್ನ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಆಂಬುಲೆನ್ಸ್ ನೀಡಿದ್ದೇನೆ. ಇದರಿಂದ ಕ್ಷೇತ್ರದ ಜನರಿಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಒಟ್ಟು, 79.82 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಆಂಬುಲೆನ್ಸ್ ಖರೀದಿಸಲಾಗಿದ್ದು, ಎರಡು ಆಂಬುಲೆನ್ಸ್ಗಳಿಗೆ ತಲಾ 9.70 ಲಕ್ಷ ರೂ. ವೆಚ್ಚದಲ್ಲಿ ವೆಂಟಿಲೇಟರ್ ಅಳವಡಿಸಲಾಗಿದೆ. ಉಳಿದ ಎರಡು ಆಂಬುಲೆನ್ಸ್ಗಳಿಗೆ ಆಕ್ಸಿಜನ್ ಸಿಲಿಂಟರ್ ಅಳವಡಿಸಲಾಗಿದೆ. ಒಂದು ವೆಂಟಿಲೇಟರ್ ಆಂಬುಲೆನ್ಸ್ ಕಾರವಾರ ಕ್ರಿಮ್ಸ್ನಲ್ಲಿ ಇರಲಿದೆ. ಇನ್ನೊಂದನ್ನು ತಾಲೂಕು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದ್ದು, ದೇವಳಮಕ್ಕಿ ಪಿಎಸ್ಸಿಯಲ್ಲಿ ಕಾರ್ಯನಿರ್ವಹಿಸಲಿದೆ. ಮತ್ತೊಂದು ವೆಂಟಿಲೇಟರ್ ಇರುವ ಆಂಬುಲೆನ್ಸ್ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿರಲಿದೆ. ನಾಲ್ಕನೇ ಆಂಬುಲೆನ್ಸ್ ಅಂಕೋಲಾದ ರಾಮನಗುಳಿಯಲ್ಲಿ ಕಾರ್ಯನಿರ್ವಹಿಸಲಿದೆ.
ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಪ್ರಿಯಾಂಗಾ ಎಂ. ಡಿಎಚ್ಒ ಡಾ.ಶರದ್ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ.ವೆಂಕಟೇಶ, ಡಾ.ಮಂಜುನಾಥ ಭಟ್, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಬಿಜೆಪಿ ಮುಖಂಡರಾದ ಗಣಪತಿ ಇಳ್ವೇಕರ್, ನಾಗರಾಜ ನಾಯಕ, ಮನೋಜ ಭಟ್, ನಾಗೇಶ ಕುರ್ಡೆಕರ್, ಸುಭಾಷ ಗುನಗಿ ಇದ್ದರು.