ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ 27ನೇ ಚಾತುರ್ವಸ್ಯ ವ್ರತ ಶ್ರೀಮಠದ ಮೂಲತಾಣ ಇಲ್ಲಿನ ಅಶೋಕೆಯಲ್ಲಿ ಆಷಾಢ ಪೂರ್ಣಿಮೆ ಜು. 5ರಿಂದ ಭಾದ್ರಪದ ಪೂರ್ಣಿಮೆ ಸೆಪ್ಟೆಂಬರ್ 2 ರವರೆಗೆ ಆಯೋಜನೆಯಾಗಿದೆ. ಸಮಗ್ರ ಭಾರತೀಯ ವಿದ್ಯೆಗಳ ಅಧ್ಯಯನದ ಸುಸ್ಥಾನವಾಗಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮತ್ತು ಅದಕ್ಕೆ ಪೂರ್ವ ಪೀಠಿಕೆಯಾಗಿ ಇಲ್ಲಿನ ಆಂಜನೇಯ ಜನ್ಮಭೂಮಿ ಪರಿಸರದಲ್ಲಿ ಮೇಲೇಳುತ್ತಿರುವ ಅಪೂರ್ವ ಗುರುಕುಲಗಳ ನಿರ್ಮಾಣ ಹಿನ್ನೆಲೆಯಲ್ಲಿ ಈ ವರ್ಷದ ಚಾತುರ್ವಸ್ಯಕ್ಕೆ ವಿದ್ಯಾ ಚಾತುರ್ವಸ್ಯ ಎಂಬ ಅಭಿದಾನ ಪ್ರದಾನ ಮಾಡಲಾಗಿದೆ. ಶ್ರೀಮಠದ ಮೂಲ ನೆಲೆ ಅಶೋಕೆಯಲ್ಲಿ ಶ್ರೀಗಳು ಆಚರಿಸುತ್ತಿರುವ ಮೂರನೇ ಚಾತುರ್ವಸ್ಯ ಇದಾಗಿದೆ.
ವಿಭಿನ್ನವಾಗಿ ಆಚರಣೆ: ಈ ವರ್ಷದ ಚಾತುರ್ವಸ್ಯ ಕರೊನಾ ಸಾಂಕ್ರಾಮಿಕದಿಂದಾಗಿ ಈ ಹಿಂದಿನ ಎಲ್ಲ ಚಾತುರ್ವಸ್ಯಕ್ಕಿಂತ ಸರ್ವ ವಿಭಿನ್ನ ಮತ್ತು ಸರಳವಾಗಿರಲಿದೆ. ಗುರು- ಶಿಷ್ಯರ ಸುರಕ್ಷೆ ದೃಷ್ಟಿಯಿಂದ ಚಾತುರ್ವಸ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅನೇಕ ಬದಲಾವಣೆ ಕೈಗೊಳ್ಳಲಾಗಿದೆ. ಕರೊನಾ ನಿಯಂತ್ರಣ ಸಂಬಂಧ ಸರ್ಕಾರ ಸೂಚಿಸಿರುವ ಎಲ್ಲ ನಿಯಮಗಳನ್ನು ಚಾತುರ್ವಸ್ಯದಲ್ಲಿ ಪಾಲಿಸಲು ನಿರ್ಧರಿಸಲಾಗಿದೆ. ಆರಂಭ ದಿನದ ಶ್ರೀ ವ್ಯಾಸಪೂಜೆಗೆ ಸಮಿತಿಯಿಂದ ಅಧಿಕೃತ ಪತ್ರ ಪಡೆದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಪಾದಪೂಜೆಗೆ ಸಾಮೂಹಿಕವಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ್ರ್ರಗಳು ಉಪಸ್ಥಿತರಿರುವ ಸ್ಥಳಕ್ಕೆ ಯಾರಿಗೂ ಪ್ರವೇಶ ಇರುವುದಿಲ್ಲ. ಯಾರಿಗೂ ಶ್ರೀಗಳಿಂದ ತೀರ್ಥ, ಮಂತ್ರಾಕ್ಷತೆ ಮತ್ತು ವೈಯಕ್ತಿಕ ಭೇಟಿ ಮತ್ತು ನಿವೇದನೆಗೆ ಆಸ್ಪದ ಇಲ್ಲ.
ನೇರ ಪ್ರಸಾರ: ಚಾತುರ್ವಸ್ಯದ ಎಲ್ಲ ಪ್ರಮುಖ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡಲಾಗುವುದು. ಶ್ರೀ ಮಠದ ಭಕ್ತರು, ಶಿಷ್ಯರು ಮತ್ತು ಅಭಿಮಾನಿಗಳು ಈ ಮೂಲಕ ಚಾತುರ್ವಸ್ಯದ ಪುಣ್ಯ ಪರ್ವಗಳನ್ನು ವೀಕ್ಷಿಸಬಹುದಾಗಿದೆ. ಇದೇ ಮೊದಲ ಬಾರಿಗೆ ಜಾರಿಗೆ ತರಲಾದ ಅತ್ಯಂತ ಅನಿವಾರ್ಯವಾದ ಈ ಬದಲಾವಣೆಗಳಿಗೆ ಸರ್ವರೂ ಸಹಕಾರ ನೀಡುವಂತೆ ವಿದ್ಯಾ ಚಾತುರ್ವಸ್ಯ ಸೇವಾ ಸಮಿತಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.