ದಾವಣಗೆರೆ: ವಿಶ್ವವಿದ್ಯಾಲಯಗಳಲ್ಲಿ ಪದವಿ ಪರೀಕ್ಷೆ ಫಲಿತಾಂಶ ವಿಳಂಬ, ವಿದ್ಯಾರ್ಥಿವೇತನ ಕಡಿತ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ (ಎನ್ಎಸ್ಯುಐ)ವು 17ರಂದು ರಾಜ್ಯವ್ಯಾಪಿ ಕಾಲೇಜುಗಳ ಬಂದ್ಗೆ ಕರೆ ನೀಡಿದೆ.
ಅಂದು ದಾವಣಗೆರೆ ವಿವಿಯ ಸಂಯೋಜಿತ ಕಾಲೇಜುಗಳನ್ನು ಬಂದ್ ಮಾಡಲಾಗುವುದು ಎಂದು ಎನ್ಎಸ್ಯುಐನ ದಾವಣಗೆರೆ ದಕ್ಷಿಣದ ಅಧ್ಯಕ್ಷ ಸೈಯದ್ ಸುಹೇಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿಲ್ಲ. ಉಚಿತ ಬಸ್ ಪಾಸ್ ರದ್ದು ಮಾಡಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಶೇ 10 ರಷ್ಟು ಬೋಧನಾ ಶುಲ್ಕ ಹೆಚ್ಚಿಸಲಾಗಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಡಿ. 17ರಂದು ಕಾಲೇಜುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪದವಿ ವಿದ್ಯಾರ್ಥಿಗಳ ಹಾಜರಾತಿಯನ್ನು ಆ್ಯಪ್ ಮೂಲಕ ನೋಡುವ ವ್ಯವಸ್ಥೆ ಈ ವರ್ಷದಿಂದ ಜಾರಿಯಾಗಿದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ಹೊರಟಿರುವ ರಾಜ್ಯ ಸರ್ಕಾರ ಮೊದಲು ಶಾಲಾಕಾಲೇಜುಗಳಲ್ಲಿ ಮೂಲಸೌಲಭ್ಯ, ವಿದ್ಯಾರ್ಥಿವೇತನ ನೀಡಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಅಲಿ ರಹಮತ್ ಪೈಲ್ವಾನ್, ಗಿರಿಧರ್ ಸಾತಳ್, ಮನೋಜ್, ಆನಂದ, ಪವನ್ ಇದ್ದರು.