ಶಿಕಾರಿಪುರ: ತಾಲೂಕಿನ ಅರಳೇಹಳ್ಳಿಯಲ್ಲಿರುವ ಏಕೈಕ ಕಾಳಜಿ ಕೇಂದ್ರದ ಅವ್ಯವಸ್ಥೆಯ ಬಗ್ಗೆ ‘ವಿಜಯವಾಣಿ’ಯಲ್ಲಿ ಗುರುವಾರ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ ಒಂದೇ ದಿನದಲ್ಲಿ ರಸ್ತೆ ನಿರ್ಮಿಸಿಕೊಟ್ಟಿದೆ.
ತಾಲೂಕು ಆಡಳಿತ ಕೆಸರಿನ ಗದ್ದೆಯಾಗಿ ಮೊಣಕಾಲಿನವರೆಗೆ ಹುಗಿದು ಹೋಗುತ್ತಿದ್ದ ಕಾಲುದಾರಿಯನ್ನು ಜೆಸಿಬಿಯಿಂದ ಅಗಲ ಮಾಡಿ ಅಲ್ಲಿದ್ದ ತಗ್ಗು ಗುಂಡಿಗಳನ್ನು ಸರಿಮಾಡಿ ಎಂ.ಸ್ಯಾಂಡ್ ಹಾಕಿ ದಾರಿ ನಿರ್ಮಿಸಿದ್ದಾರೆ. ಕಳೆದ ಹತ್ತು ದಿನಗಳಿಂದ ಕಾಳಜಿ ಕೇಂದ್ರದಲ್ಲಿ ಇರುವ ಎರಡು ಕುಟುಂಬದ ಸದಸ್ಯರು ಇದೇ ಕೆಸರು ದಾರಿಯಲ್ಲಿಯೇ ಕಾಲು ಜಾರುತ್ತಿದ್ದರೂ, ಅಡಿಗೊಂದು ಖಾಲಿ ಗೊಬ್ಬರ ಚೀಲಗಳನ್ನು ಹಾಕಿಕೊಂಡು ಓಡಾಡುತ್ತಿದ್ದರು. ಅಧಿಕಾರಿಗಳ ತುರ್ತು ಸ್ಪಂದನೆಯಿಂದ ಸಂತ್ರಸ್ತರಿಗೆ ಅನುಕೂಲವಾಗಿದೆ. ಇದಕ್ಕೆ ಕಾರಣವಾದ ‘ವಿಜಯವಾಣಿ’ಯನ್ನು ಗ್ರಾಮಸ್ಥರು, ಕಾಳಜಿ ಕೇಂದ್ರದ ನಿವಾಸಿಗಳು ಶ್ಲಾಘಿಸಿದ್ದಾರೆ.