ವಿಜಯಪುರ: ಅವಳಿ ಜಿಲ್ಲೆಯ ದ್ವಿಸದಸ್ಯ ಸ್ಥಾನದ
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪಿ.ಎಚ್. ಪೂಜಾರ ಉಮೇದುವಾರಿಕೆ ಸಲ್ಲಿಸಿದರು.
ಶನಿವಾರ ಜಿಲ್ಲಾಡಳಿತ ಕಚೇರಿಗೆ ಪಕ್ಷದ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣೆ ಅಧಿಕಾರಿ ಪಿ.ಸುನೀಲಕುಮಾರ ಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಳಿ ಜಿಲ್ಲೆಯಲ್ಲಿ ಸಾಮಾಜಿಕ ಚಟುವಟಿಕೆಗಳ ಜೊತೆಗೆ ಬಿಜೆಪಿ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಹೋರಾಟ ಮಾಡಿದ್ದೇನೆ. ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟಿಸಿದ್ದೇನೆ. ಹೀಗಾಗಿ ಪಕ್ಷ ನನ್ನ ಸೇವೆ ಗುರುತಿಸಿ ಅವಕಾಶ ಕಲ್ಪಿಸಿದೆ. ಎರಡೂ ಜಿಲ್ಲೆಯ ನಾಯಕರ ವಿಶ್ವಾಸ ಪಡೆದು ಒಟ್ಟಾಗಿ ಚುನಾವಣೆ ಎದುರಿಸುವುದಾಗಿ ತಿಳಿಸಿದರು.
ಎರಡೂ ಜಿಲ್ಲೆಯ ನಾಯಕರ ಅಭಿಪ್ರಾಯ ಪಡೆದೇ ಟಿಕೆಟ್ ನೀಡಲಾಗಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ. ಗದ್ದಿಗೌಡರ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಹಣಮಂತ ನಿರಾಣಿ, ರಮೇಶ ಭೂಸನೂರ, ವಿಜುಗೌಡ ಪಾಟೀಲ ಮತ್ತಿತರರಿದ್ದರು.