More

    ವಾಗೀಶಸ್ವಾಮಿ ಬಂಧನಕ್ಕೆ ಆಗ್ರಹಿಸಿ ನಾಳೆ ರಾಜ್ಯಪಾಲರಿಗೆ ದೂರು

    ದಾವಣಗೆರೆ: ಬೇಡ ಜಂಗಮ ನಕಲಿ ಜಾತಿ ಪ್ರಮಾಣಪತ್ರ ಪಡೆದು ಪರಿಶಿಷ್ಟರಿಗೆ ವಂಚನೆ ಮಾಡಿದ್ದಾರೆ ಎನ್ನಲಾದ ಭಾನುವಳ್ಳಿಯ ಬಿ.ಎಂ.ವಾಗೀಶಸ್ವಾಮಿ ವಿರುದ್ಧ ಕ್ರಿಮಿನಲ್ ದಾವೆ ಹೂಡುವ ಜತೆಗೆ ಬಂಧಿಸಬೇಕು. ಪರಿಶಿಷ್ಟ ಜನಾಂಗವನ್ನು ರಕ್ಷಣೆ ಮಾಡಬೇಕು ಎಂದು ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಒತ್ತಾಯಿಸಿದೆ.
    ವಂಶವೃಕ್ಷ ಮತ್ತು ದಾಖಲಾತಿ ಪ್ರಕಾರ ಲಿಂಗಾಯತರಾದ ಬಿ. ಎಂ.ವಾಗೀಶ್ ಸೇರಿ ಏಳು ಮಂದಿ ಕುಟುಂಬ ಸದಸ್ಯರು ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ ಬೇಡ ಜಂಗಮ ಹೆಸರಿನಲ್ಲಿ ಒಂದೇ ದಿನ ನಕಲಿ ಜಾತಿ ಪ್ರಮಾಣಪತ್ರ ಪಡೆದು, ಪರಿಶಿಷ್ಟ ಜಾತಿಯವರಿಗೆ ವಂಚನೆ ಮಾಡಿದ್ದಾರೆ. ಮಾಯಕೊಂಡ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಪತ್ನಿ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ವೇದಿಕೆಯ ಸಂಚಾಲಕ ಚಿನ್ನಸಮುದ್ರ ಶೇಖರ್‌ನಾಯ್ಕ ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ, ಬಿ.ಎಂ.ವಾಗೀಶ್ ಅವರ ನಕಲಿ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿದ ಆದೇಶ ಗಮನಿಸಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ, ಅವರ ನಾಮಪತ್ರವನ್ನು ರದ್ದುಗೊಳಿಸಿದ್ದಾರೆ. ಆದರೆ ಇದೇ ಜಾತಿ ಪತ್ರ ಗೊಂದಲವುಳ್ಳ ವಾಗೀಶರ ಪತ್ನಿ ಪುಷ್ಪಾ ಅವರ ನಾಮಪತ್ರ ಅಂಗೀಕರಿಸಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಕಾಡಿದೆ ಎಂದು ದೂರಿದರು.
    ನಕಲಿ ಜಾತಿ ಪ್ರಮಾಣಪತ್ರದೊಂದಿಗೆ ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದ ಪುಷ್ಪಾ ವಾಗೀಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವೇದಿಕೆ ಸದಸ್ಯರು ಮಂಗಳವಾರ ಬೆಂಗಳೂರಿಗೆ ತೆರಳಿ ರಾಜ್ಯಪಾಲರು, ಎಸ್ಸಿ-ಎಸ್ಟಿ ಆಯೋಗ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಿದ್ದೇವೆ. ನ್ಯಾಯ ಸಿಗದಿದ್ದರೆ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಬಿಜೆಪಿ ಅಭ್ಯರ್ಥಿ ವಿರುದ್ಧ ಪತ್ನಿಯನ್ನು ಉಮೇದುವಾರರಾಗಿ ಕಣಕ್ಕಿಳಿಸಿದ ಬಿ.ಎಂ.ವಾಗೀಶ್ ವಿರುದ್ಧ ಜಿಲ್ಲೆಯ ವರಿಷ್ಠರು ಕ್ರಮ ಕೈಗೊಂಡಿಲ್ಲ. ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಇಲ್ಲವಾದಲ್ಲಿ ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ ಅವರನ್ನು ಪರಿಶಿಷ್ಟರ ವಿರೋಧಿಗಳು ಎಂದು ಪರಿಗಣಿಸಲಾಗುವುದು ಎಂದರು.
    ಲಿಂಗಾಯತ ವರ್ಗದಲ್ಲಿ ಒಟ್ಟು 19 ಉಪಜಾತಿಗಳಿವೆ. ಅದರಲ್ಲಿನ ವೀರಶೈವ ಬೇಡುವ ಜಂಗಮ ಎಂಬ ಹೆಸರನ್ನು ತಿದ್ದುಪಡಿ ಮಾಡಿಸಿಕೊಳ್ಳಲಾಗಿದೆ. ಪುಷ್ಪಾ ವಾಗೀಶ್ ಅವರ ನಕಲಿ ಜಾತಿಪ್ರಮಾಣಪತ್ರ ಈಗಾಗಲೆ ಕೋರ್ಟ್‌ನಲ್ಲಿ ರದ್ದಾಗಿದ್ದರೂ ರಜೆ ಕಾರಣಕ್ಕೆ ಪ್ರತಿ ಸಿಗುತ್ತಿಲ್ಲ. ವಾಗೀಶ್ ಅವರು ಬೇಡ ಜಂಗಮರೇ ಆಗಿದ್ದಲ್ಲಿ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
    ದಸಂಸ ರಾಜ್ಯ ಸಂಚಾಲಕ ಎಚ್.ಮಲ್ಲೇಶ್, ಎಸ್.ಟಿ.ಸೋಮಶೇಖರ್, ತಣಿಗೆರೆ ಅಣ್ಣಪ್ಪ, ಚಂದ್ರಪ್ಪ ಕಂದಗಲ್, ಲಕ್ಷ್ಮಣ್ ರಾಮಾವತ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts