ಹುಬ್ಬಳ್ಳಿ: ಶ್ರಮಿಕ ವರ್ಗದ ಬದುಕಿಗೆ ಸಮಾಜದ ಇತರರು ಆಶ್ರಯ ನೀಡುವುದರಿಂದ ಅವರೂ ಒಂದಿಷ್ಟು ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯವಾಗುತ್ತದೆ. ಅದಕ್ಕಾಗಿ ಎಲ್ಲರೂ ಅಲ್ಪ ಪ್ರಮಾಣದ ಸಹಾಯವನ್ನಾದರೂ ಮಾಡಬೇಕು ಎಂದು ಧಾರವಾಡದ ಮಕ್ಕಳ ತಜ್ಞ ಕವನ ದೇಶಪಾಂಡೆ ಹೇಳಿದರು.
ಧಾರವಾಡದ ಭಾರತೀಯ ರೆಡ್ಕ್ರಾಸ್ ಸೊಸೈಟಿ, ನವನಗರದ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆ, ಮೆಜೇಥಿಯಾ ಫೌಂಡೇಶನ್, ಮಕ್ಕಳ ಸಹಾಯವಾಣಿ ಧಾರವಾಡ ಮತ್ತು ಎನ್ಜಿಒ ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶೇಷ ವಲಸೆ ಹೋಗುವ ಮಕ್ಕಳ ಸಭೆಯಲ್ಲಿ ಅವರು ಮಾತನಾಡಿದರು. ಕರೊನಾ ಕಾಡುತ್ತಿರುವ ಈ ಸಂದರ್ಭದಲ್ಲಿ ಶ್ರಮಿಕರಲ್ಲಿ ಜಾಗೃತಿ ಮೂಡಿಸುವುದು ಮಹತ್ವದ ಕೆಲಸ. ಸ್ವಚ್ಛತೆ ನಿರ್ವಹಣೆ, ಪರಸ್ಪರ ಅಂತರ ಕಾಪಾಡುವುದೇ ಮೊದಲಾದ ಉಪಕ್ರಮಗಳಿಂದ ಈ ರೋಗ ಹರಡುವುದನ್ನು ತಡೆಗಟ್ಟಲು ಸಾಧ್ಯ ಎಂದರು.
ಕರೊನಾ ಹರಡದಂತೆ ನೋಡಿಕೊಳ್ಳುವ ಕುರಿತು ಮಾಹಿತಿ ನೀಡಿ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್, ಸಾಬೂನು ಮತ್ತು ಜ್ಯೂಸ್ ವಿತರಣೆ ಮಾಡಿದರು.
ಡಾ. ಉಮೇಶ ಹಳ್ಳಿಕೇರಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯಿಂದ ಮಾರ್ಚ್ನಿಂದ ಇಲ್ಲಿಯವರೆಗೂ ಹಿಂದುಳಿದ ಮತ್ತು ಶ್ರಮಿಕ ವರ್ಗದವರಿಗೆ ನಿರಂತರವಾಗಿ ಆಹಾರದ ಕಿಟ್, ಸ್ಯಾನಿಟೈಸರ್, ಸೋಪು, ಮಾಸ್ಕ್ ವಿತರಣೆ ಹಾಗೂ ಜಾಗೃತಿ ಬಗ್ಗೆ ಕಾರ್ಯಕ್ರಮ ಮಾಡಲಾಗಿದೆ ಎಂದು ಹೇಳಿದರು.
ಸಾಹಿತಿ ಮಾರ್ತಾಂಡಪ್ಪ ಕತ್ತಿ, ಡಾ. ಧೀರಜ ವೀರನಗೌಡ, ದಯಾನಂದ ಸಾಧನಿ, ಚಂದ್ರಶೇಖರ ರಾಹುತರ, ಬಿಡಿಎಸ್ಎಸ್ ಮಕ್ಕಳ ಸಹಾಯವಾಣಿಯ ಸುಜಾತಾ ತಡಕೋಡ, ಲಕ್ಷ್ಮಣ ಕರಿ ಹಾಗೂ ಸಿದ್ಧೇಶ್ವರ ನಗರ ಸುಡುಗಾಡ ಸಿದ್ಧರ ಸಂಘದ ಪದಾಧಿಕಾರಿಗಳು, ಇತರರು ಇದ್ದರು.