ಚಿಂತಾಮಣಿ: ಬೆಸ್ಕಾಂ ಇಲಾಖೆಯ ಗ್ರಾಮಾಂತರ ಉಪ ವಿಭಾಗದ ಬಟ್ಲಹಳ್ಳಿ ಮತ್ತು ಇರಗಂಪಲ್ಲಿ ಶಾಖೆಯಲ್ಲಿ ಲಕ್ಷಾಂತರ ರೂ. ಅಕ್ರಮ ನಡೆದಿದೆ ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿಯಮಿತದ ಅಧ್ಯಕ್ಷ ಮಾದಮಂಗಲ ಚಂದ್ರಪ್ಪ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮಾಂತರ ಉಪ ವಿಸ್ತೀರ್ಣದ ಬಟ್ಲಹಳ್ಳಿ ಮತ್ತು ಇರಗಂಪಲ್ಲಿ ಶಾಖೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಬೆಸ್ಕಾಂನ ಮುಖ್ಯಇಂಜಿನಿಯರ್ ಕಚೇರಿ, ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತ ಮತ್ತು ಚಿಂತಾಮಣಿ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರಿಗೆ ದೂರು ನೀಡಿದ್ದಾರೆ.
ಬಟ್ಲಹಳ್ಳಿ ಮತ್ತು ಇರಗಂಪಲ್ಲಿ ಶಾಖೆಯಲ್ಲಿ ಇಂಜಿನಿಯರ್ಗಳಾದ ಗೋಪಾಲಕೃಷ್ಣ ಬಾಬು ಮತ್ತು ಅನಿಲ್ ಕುಮಾರ್ ಇಲಾಖೆಯಿಂದ ಕೆಲಸಗಳನ್ನು ಮಾಡಿಕೊಡಲು ರೈತರ ಬಳಿ 50 ಸಾವಿರದಿಂದ ಒಂದು ಲಕ್ಷದವರೆಗೆ ಹಣ ಪಡೆಯುತ್ತಿದ್ದಾರೆ, ವಿದ್ಯುತ್ ಕಂಬಗಳ ಸ್ಥಳಾಂತರ ಮತ್ತು ಅಕ್ರಮ-ಸಕ್ರಮ ಕೆಲಸದ ಕಾಂಟ್ರಾಕ್ಟ್ ಮಾಡಿಕೊಂಡಿದ್ದು ನೇರವಾಗಿ ರೈತರ ಬಳಿ ಹಣ ಪಡೆದು ಕೆಲಸಗಳನ್ನು ಮಾಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಲ್ಲರಾಳ್ಳಹಳ್ಳಿ ಕ್ರಾಸ್ನ ದೊನಮಾನ್ಗಡ್ಡ ಬಳಿ 5 ಕಂಬಗಳ 11 ಕೆ.ವಿ ವೈರ್ಗಳನ್ನು ಇರಗಂಪಲ್ಲಿ ಶಾಖೆಯ ಇಂಜಿನಿಯರ್ ಯಾವುದೇ ವರ್ಕ್ ಆರ್ಡರ್ ಪಡೆಯದೆ ಅಕ್ರಮವಾಗಿ ಕೆಲಸ ಮಾಡಿಸಿದ್ದಾರೆ. ಈ ಬಗ್ಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರಾಮಾಂತರ ಉಪವಿಭಾಗದ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಇರಗಂಪಲ್ಲಿ ಶಾಖೆ ವ್ಯಾಪ್ತಿಯ ಬ್ರಾಹ್ಮಣಹಳ್ಳಿ ಕಾಲನಿಯಲ್ಲಿ ಅಕ್ರಮವಾಗಿ 9 ಕಂಬಗಳನ್ನು ಬದಲಾಯಿಸಿದ್ದಾರೆ.
ನಾಗರಾಜಹೊಸಹಳ್ಳಿ ಬಳಿ ಟಿಪ್ಪರ್ ಡಿಕ್ಕಿ ಹೊಡೆದು 8 ಕಂಬಗಳು ಮುರಿದು ಬಿದ್ದಿದ್ದು, ಟಿಪ್ಪರ್ ಡ್ರೈವರ್ನಿಂದ 40 ಸಾವಿರ ರೂ.ಪಡೆದು, ಮಳೆಯಿಂದಾಗಿ ಕಂಬಗಳು ಬಿದ್ದಿವೆ ಎಂದು ತೋರಿಸಿ ಕೆಲಸ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.