ಸೇಡಂ (ಕಲಬುರಗಿ): ಪ್ರಸಕ್ತ ಮಳೆಗಾಲದ ಅವಧಿಯಲ್ಲಿಯೇ ಗುರುವಾರ ತಡರಾತ್ರಿ ಪಟ್ಟಣದಲ್ಲಿ ಅತ್ಯಧಿಕ ಮಳೆ ಸುರಿದಿದ್ದು, ತಗ್ಗು ಪ್ರದೇಶದ ನಿವಾಸಿಗಳು ಕೆಲ-ಕಾಲ ಆತಂಕಕ್ಕೆ ಒಳಗಾದರು.
ಗುರುವಾರ ರಾತ್ರಿ 3 ಗಂಟೆ ಅವಧಿಯಲ್ಲಿ ಬರೋಬ್ಬರಿ 86 ಮಿಮೀ. ಮಳೆಯಾಗಿದ್ದು, ಇದು ಈ ವರ್ಷದಲ್ಲಿ ತಾಲೂಕಿನಲ್ಲಿ ಸುರಿದ ಅತ್ಯಧಿಕ ವರ್ಷಧಾರೆಯಾಗಿದೆ ಎಂದು ಹೇಳಲಾಗುತ್ತಿದೆ. ತಾಲೂಕಿನಾದ್ಯಂತ ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಇದರಿಂದಾಗಿ ಈಗಾಗಲೇ ರೈತರ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಕೈಗೆ ಬರಬೇಕಾದ ಹೆಸರು, ಉದ್ದು, ತೊಗರಿಗೆ ಹಾನಿಯಾಗಿದೆ.
ಹೆಚ್ಚಿನ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಯಿತು. ಇನ್ನು ಪಟ್ಟಣದ ಪೊಲೀಸ್ ಠಾಣೆಗೆ ಅತ್ಯಧಿಕ ಮಳೆ ನೀರು ನುಗ್ಗಿದ್ದು, ದಾಖಲೆಗಳು ಸೇರಿ ಒಂದಿಷ್ಟು ಹಾನಿಯಾಗಿದೆ. ಅಲ್ಲಲ್ಲಿ ಹಳೆಯ ಗೋಡೆಗಳಿಗೂ ಹಾನಿಯಾಗಿದೆ. ಶುಕ್ರವಾರ ಬೆಳಗ್ಗೆ ಹಾಗೂ ಸಂಜೆಯೂ ಮಳೆ ಸುರಿದಿದೆ.
ತಾಲೂಕಿನ ಹಳ್ಳಿಗಳಿಗೆ ಗ್ರಾಮ ಲೇಖಪಾಲಕರು ಭೇಟಿ ನೀಡಿದ್ದಾರೆ. ಆದರೆ ಯಾವುದೇ ಹಾನಿಯಾಗಲಿ, ಮನೆ ಕುಸಿದ ಪ್ರಕರಣಗಳು ವರದಿಯಾಗಿಲ್ಲ. ಪಟ್ಟಣದಲ್ಲಿ ಹೆಚ್ಚಿನ ಮಳೆಯಾಗಿದೆ. ಇಲ್ಲಿಯೂ ರಸ್ತೆಯಲ್ಲಿ ಹೆಚ್ಚಿನ ನೀರು ಶೇಖರಣೆಯಾಗಿತ್ತು. ಪುರಸಭೆ ಸಿಬ್ಬಂದಿ ಚರಂಡಿಗಳನ್ನು ಸ್ವಚ್ಛಗೊಳಿಸಿ, ನೀರು ನಿಲ್ಲದಂತೆ ಮಾಡಿದ್ದಾರೆ.
| ಬಸವರಾಜ ಬೆಣ್ಣೆಶಿರೂರ, ತಹಸೀಲ್ದಾರ್
ಧಾರಾಕಾರ ಮಳೆಯಿಂದ ಭಾಗಶಃ ಬೆಳೆ ಹಾನಿಯಾಗಿದೆ. ಬೆಳೆ ವಿಮೆ ಕಂತು ಪಾವತಿಸಿ, ದೂರು ಸಲ್ಲಿಸಿದವರ ಜಮೀನಿಗೆ ತೆರಳಿ ಪರಿಶೀಲನೆ ಮಾಡಲಾಗಿದೆ. ಅಂತಹವರಿಗೆ ಸರ್ಕಾರದ ಪರಿಹಾರ ನೀಡಲು ಕ್ರಮವಹಿಸಲಾಗುವುದು. ವಿಮೆ ಮಾಡಿಕೊಂಡ ರೈತರು ವಿಮೆ ಕಂಪನಿಯ ಟ್ರೋಲ್ ಪ್ರೀ 18002005142 ಸಂಖ್ಯೆಗೆ ಕರೆ ಬೆಳೆ ಹಾನಿಯ ಬಗ್ಗೆ ದೂರು ದಾಖಲಿಸಬಹುದಾಗಿದೆ.
| ಎ.ವೈ.ಹಂಪಣ್ಣ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ