More

    ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ -ಡಾ.ಫ.ಗು. ಹಳಕಟ್ಟಿ ತ್ಯಾಗ ಸ್ಮರಣೀಯ

    ದಾವಣಗೆರೆ: ಅಮೂಲ್ಯ ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಜನತೆಗೆ ಪರಿಚಯಿಸಿದ ಡಾ.ಫ.ಗು. ಹಳಕಟ್ಟಿಯವರ ತ್ಯಾಗ, ಸಾಹಿತ್ಯ ಲೋಕಕ್ಕೆ ಸ್ಮರಣೀಯವಾದುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
    ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಡಾ.ಫ.ಗು ಹಳಕಟ್ಟಿಯವರ ಜನ್ಮ ದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ಶ್ರೀ ಹಡಪದ ಅಣ್ಣಪ್ಪ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಸಮೃದ್ಧವಾಗಬೇಕಾದರೆ ನೈತಿಕ ನೆಲೆಗಟ್ಟಿನ ವಚನಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು.
    ಡಾ.ಫ.ಗು. ಹಳಕಟ್ಟಿಯವರು ವೈಯಕ್ತಿಕ ಜೀವನದ ಆಸೆ-ಆಕಾಂಕ್ಷೆಗಳನ್ನು ತೊರೆದು ಸಾಮಾಜಿಕ ಹಿತಕ್ಕಾಗಿ ಶಿವಶರಣರ ಅಮೂಲ್ಯ ವಚನ ಭಂಡಾರವನ್ನು ಕನ್ನಡ ನಾಡಿಗೆ ನೀಡಿ ಉಪಕರಿಸಿದ್ದಾರೆ. 12ನೇ ಶತಮಾನದ ವಚನ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸದಿದ್ದರೆ, ಅದರ ಸಾರವನ್ನು ತಿಳಿಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.
    ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಇವರ 354 ವಚನಗಳು ಬಸವಣ್ಣನವರ ಮೇಲಿನ ಗೌರವ ಭಕ್ತಿಯನ್ನು ವ್ಯಕ್ತಪಡಿಸುತ್ತವೆ ಎಂದರು.
    ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ ಹಡಪದ ಹಪ್ಪಣ್ಣನವರು ತಮ್ಮ ವಚನ ಸಾಹಿತ್ಯದಲ್ಲಿ ಜೀವನದ ನೈತಿಕ ನೆಲೆಗಟ್ಟಿನ ವಿಚಾರಗಳನ್ನು ತಿಳಿಸಿದ್ದಾರೆ ಎಂದರು.
    ಹೊನ್ನಾಳಿಯ ಅಭಿನೇತ್ರಿ ಕಲಾ ತಂಡದವರು ನೃತ್ಯ ಪ್ರದರ್ಶಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ದೂಡಾ ಆಯುಕ್ತ ಬಸವನಗೌಡ, ಶಾರದಾ, ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಶಶಿಧರ್ ಬಸಾಪುರ, ಶಿವಾನಂದ ಗುರೂಜಿ, ಎನ್.ಜೆ ಶಿವಕುಮಾರ್, ದಿಳ್ಳೆಪ್ಪ, ಮಲ್ಲಿಕಾರ್ಜುನ್ ಇತರರಿದ್ದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts