ದಾವಣಗೆರೆ: ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ಆರೋಪದಡಿ ಭಾರತೀಯ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು. ದೌರ್ಜನ್ಯದ ಪ್ರಕರಣಗಳನ್ನು ನ್ಯಾಯಯುತ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಮಾಯಕೊಂಡ ಹೋಬಳಿ ಕೇಂದ್ರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ಮುಖಂಡ ಟಿವಿಎಸ್ ರಾಜು ಮಾತನಾಡಿ ಲೈಂಗಿಕ ಕಿರುಕುಳದ ಆರೋಪಿಗಳನ್ನು ದೆಹಲಿ ಪೊಲೀಸರು ಇದುವರೆಗೂ ಬಂಧಿಸಿಲ್ಲ. ದೆಹಲಿಯಲ್ಲಿ ಧರಣಿ ನಡೆಯುತ್ತಿದ್ದರೂ ಅಲ್ಲಿನ ಪೊಲೀಸರು ಮೌನ ತಾಳಿದ್ದಾರೆ. ಬಿಜೆಪಿ ಸಂಸದರಾಗಿರುವ ಬ್ರಿಜ್ಭೂಷಣ್ ಪ್ರಭಾವಕ್ಕೆ ಮಣಿದಿರುವ ಶಂಕೆ ಇದೆ ಎಂದರು.
ಎಐಕೆಕೆಎಂಎಸ್ನ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಸುನೀತ್ಕುಮಾರ್ ಮಾತನಾಡಿ ಬೇಟಿ ಬಚಾವೋ ಬೇಟಿ ಪಡಾವೋ ಎಂದು ಘೋಷಣೆ ನೀಡಿರುವ ಸರ್ಕಾರವು ಕ್ರೀಡೆಯಲ್ಲಿ ಹೆಣ್ಣು ಮಕ್ಕಳ ಸಾಧನೆಗೆ ಪೂರಕವಾಗಿ ಸುರಕ್ಷಿತ ವಾತಾವರಣ ಸೃಷ್ಟಿಸಿ ಕೊಡುವುದೂ ಕೂಡ ಆದ್ಯ ಕರ್ತವ್ಯ ಎಂದು ಭಾವಿಸಬೇಕು. ಖ್ಯಾತನಾಮ ಕುಸ್ತಿಪಟುಗಳು ರಸ್ತೆಗಿಳಿದರೂ ಕ್ರಮ ಕೈಗೊಂಡಿಲ್ಲ. ಮೇರಿಕೋಂ ಸಮಿತಿಯ ವರದಿಯನ್ನು ಕ್ರೀಡಾ ಇಲಾಖೆ ಬಹಿರಂಗಪಡಿಸಿಲ್ಲ ಎಂದು ವಿಷಾಧಿಸಿದರು.
ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತಾ ಮಾತನಾಡಿ, ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟ ಯುವತಿಯರ ಪರಿಸ್ಥಿತಿಯೇ ಹೀಗಿದ್ದರೆ ದೇಶದ ಸಾಮಾನ್ಯ ಮಹಿಳೆಯರ ಗತಿ ಏನು ಎಂದು ಪ್ರಶ್ನಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ರೈತ ಮುಖಂಡ ಅಶೋಕ್, ಪ್ರತಾಪ್, ಮಾಜಿ ಕುಸ್ತಿಪಟುಗಳಾದ ಶೇಖರಪ್ಪ, ಬಸಣ್ಣ, ತಿಪ್ಪೇಶ್, ಗ್ರಾಮಸ್ಥರಾದ ಭೀಮಣ್ಣ,ಮೈಲಾರಪ್ಪ, ಶಿವಕುಮಾರ್, ಮಂಜಪ್ಪ, ಧರ್ಮರಾಜ್ ಇತರರಿದ್ದರು.
—