ಶಿವಮೊಗ್ಗ: ಇನ್ನು ಮುಂದೆ ಬೆಳಗ್ಗೆ 10ರಿಂದ ಸಂಜೆ 6ರವರಗೆ ಮಾತ್ರ ವಹಿವಾಟು. ಸಂಜೆ 6ರಿಂದ ಮರುದಿನ ಬೆಳಗ್ಗೆ 10 ಗಂಟೆವರೆಗೆ ಎಲ್ಲ ಚಟುವಟಿಕೆ ಸ್ಥಬ್ಧ. ಈ ಅವಧಿ ಹೆಚ್ಚೂ ಕಡಿಮೆ ಕರ್ಫ್ಯೂ ಮಾದರಿಯಲ್ಲಿ ಇರಬೇಕು. ಆದರೆ ಅವಶ್ಯಕ ಸೇವೆಗಳಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ. ಕೆಲಸ ಇಲ್ಲದಿದ್ದರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಪ್ರತಿಯೊಬ್ಬರೂ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕು.
ಲಾಕ್ಡೌನ್ ಸಡಿಲಿಕೆ ನಂತರ ಮಲೆನಾಡಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಕರೆದಿದ್ದ ವರ್ತಕರು, ವಾಣಿಜ್ಯೋದ್ಯಮಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ರ್ಚಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಇಷ್ಟಾದರೂ ಸಹ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಈ ಸಭೆಯಲ್ಲಿಯೇ ನಿರ್ಣಯ ಮಾಡಲಾಗಿದೆ.
ಮಲೆನಾಡು ಸುರಕ್ಷಿತವಾಗಿರಬೇಕಾದರೆ ಈ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಜಿಲ್ಲೆಯ ಜನ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸಾರ್ವಜನಿಕರ ಸಹಕಾರ ಇಲ್ಲದೇ ಕರೊನಾ ನಿಯಂತ್ರಣ ಅಸಾಧ್ಯ. ಹಾಗಾಗಿ ಎಲ್ಲ ಸಂಘಸಂಸ್ಥೆಗಳ ಸಲಹೆಯಂತೆ ವ್ಯಾಪಾರ-ವಹಿವಾಟಿನ ಅವಧಿಯನ್ನು ಸೀಮಿತಗೊಳಿಸಲಾಗಿದೆ ಎಂದರು.
ಸಾರ್ವಜನಿಕರು ಹೀಗೆ ಇರಬೇಕು ಎಂಬ ಸೂಚನೆಯನ್ನು ಸರ್ಕಾರದಿಂದ ಕೊಡಲು ಆಗುವುದಿಲ್ಲ. ಆದರೂ ಯಾರೊಬ್ಬರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಸಂಜೆ 6ರ ನಂತರ ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸಲಾಗುವುದು ಎಂದರು.
ಪ್ರಭಾವಿಯಾಗಿದ್ರೂ ದಂಡ ಖಚಿತ: ಯಾವುದೇ ಕಾರಣಕ್ಕೂ ಒತ್ತಾಯದ ಲಾಕ್ಡೌನ್ ಜಾರಿ ಇಲ್ಲ, ಆದರೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪರಿಸ್ಪರ ಅಂತರ ಕಾಯ್ದುಕೊಳ್ಳುವುದು ಸೇರಿ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮಾಸ್ಕ್ ಧರಿಸದೇ ಓಡಾಡುವವರು ಎಷ್ಟೇ ಪ್ರಭಾವಿಯಾಗಿದ್ದರೂ ದಂಡ ವಿಧಿಸಬೇಕು ಎಂದು ಎಸ್ಪಿ ಹಾಗೂ ಪಾಲಿಕೆ ಆಯುಕ್ತರಿಗೆ ಸಚಿವ ಈಶ್ವರಪ್ಪ ಸೂಚಿಸಿದರು.
ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಎಲ್ಲ ಕ್ರಮಗಳಿಗೆ ಸಾರ್ವಜನಿಕರು ಇದುವರೆಗೆ ಸಹಕರಿಸಿದ್ದಾರೆ. ಆದರೆ ಕೆಲವು ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ಒಂದೆಡೆ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ವ್ಯಾಪಾರ ವಹಿವಾಟಿಗೆ ಕಾಲಮಿತಿ ನಿಗದಿಗೊಳಿಸಲಾಗುತ್ತಿದೆ. ರಾಜ್ಯದಲ್ಲೆಡೆ ರಾತ್ರಿ 8ರಿಂದ ಕರ್ಫ್ಯೂ ಜಾರಿಯಲ್ಲಿರಲಿದ್ದು, ಶಿವಮೊಗ್ಗದಲ್ಲಿ ಇದು ಸಂಜೆ 6ಗಂಟೆಯಿಂದ ಜಾರಿಯಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ 42 ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಹಲವು ಸಲಹೆ ನೀಡಿದರು. ಕಡಿದಾಳ್ ಗೋಪಾಲ್, ತಲ್ಕಿನ್ ಅಹಮ್ಮದ್, ಗೋಪಿನಾಥ, ಉದಯ್ಕುಮಾರ್, ಸುರೇಶ್, ಕೆ.ರಂಗಪ್ಪ, ವೆಂಕಟೇಶ್ವುೂರ್ತಿ, ರಾಘವೇಂದ್ರ, ಮಧುಸೂಧನ್ ಐತಾಳ್, ಉಮೇಶ್ ಶಾಸ್ತ್ರಿ, ಅಲ್ಲಾಭಕ್ಷಿ, ಅಶ್ವಥನಾರಾಯಣ ಶೆಟ್ಟಿ, ವಿವೇಕಾನಂದ ನಾಯ್್ಕ ಲಕ್ಷ್ಮೀಕಾಂತ್ ಸೇರಿ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧಾ ಎಸ್ಪಿ ಕೆ.ಎಂ.ಶಾಂತರಾಜು, ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮತ್ತಿತರರು ಉಪಸ್ಥಿತರಿದ್ದರು.
ವೈಯಕ್ತಿಕ ಶಿಸ್ತಿನಿಂದ ನಿಯಂತ್ರಣ: ಜಿಲ್ಲೆಯ ಜನತೆ ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಗೆ ಸಹಕಾರ ನೀಡಿದ್ದಾರೆ. ಇದೀಗ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಂಪೂರ್ಣ ಲಾಕ್ಡೌನ್ ಕಾರ್ಯಸಾಧುವಲ್ಲ. ಆದರೆ ಸಾರ್ವಜನಿಕರು ವೈಯಕ್ತಿಕ ಶಿಸ್ತನ್ನು ಪಾಲಿಸುವ ಮೂಲಕ ಕರೊನಾ ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು.
ಹುಕ್ಕ ಲೈಸನ್ಸ್ ಕ್ಯಾನ್ಸಲ್ಗೆ ಸೂಚನೆ: ಶಿವಮೊಗ್ಗದಲ್ಲಿ ಹುಕ್ಕ ಮಾರಾಟದ ಪರವಾನಗಿ ರದ್ದುಗೊಳಿಸುವಂತೆ ಸಚಿವ ಕೆ.ಎಸ್.ಈಶ್ವರಪ್ಪ ನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರಿಗೆ ಸೂಚಿಸಿದರು. ಮಲೆನಾಡಲ್ಲಿ ಹುಕ್ಕ ಇರುವುದು ನಾಚಿಗೆಗೇಡಿನ ಸಂಗತಿಯಾಗಿದೆ. ತಕ್ಷಣವೇ ಹುಕ್ಕ ಮಾರಾಟ ರದ್ದುಗೊಳಿಸಿ ಮಾಲೀಕರಿಗೆ ಪರ್ಯಾಯ ವ್ಯವಹಾರ ಮಾಡಿಕೊಳ್ಳುವುದಕ್ಕೆ ಸಲಹೆ ನೀಡಬೇಕು ಎಂದರು. ಗೋಪಾಳ ಸೇರಿ ಹಲವೆಡೆ ಹುಕ್ಕ ಆರ್ಭಟ ಜೋರಾಗಿದೆ. ಇದರಿಂದ ಯುವ ಪೀಳಿಗೆ ದುಶ್ಚಟಕ್ಕೆ ಬೀಳುತ್ತಿದ್ದು ಜೀವನ ಹಾಳು ಮಾಡುತ್ತಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಸಂತ್ಕುಮಾರ್ ಸಭೆಯ ಗಮನಕ್ಕೆ ತಂದಿದ್ದರು.
ಹಗಲು ಮಾತ್ರ ಪೆಟ್ರೋಲ್: ಕರೊನಾ ತಡೆಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುವ ಕುರಿತು ಶಿವಮೊಗ್ಗ ಜಿಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದು ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಪೆಟ್ರೋಲ್ ಬಂಕ್ ತೆರೆದಿರಲಿವೆ. ರಾತ್ರಿ 7ರ ನಂತರ ಪೆಟ್ರೋಲ್ ಹಾಕುವುದಿಲ್ಲ ಎಂದು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಅರುಣ್ ತಿಳಿಸಿದರು.
ಇಂದು ಜನತಾ ಕರ್ಫ್ಯೂ ಜಾರಿ: ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಜು.5ರಂದು ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಜಾರಿಗೊಳ್ಳಲಿದೆ. ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 9ರವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಹಾಗಾಗಿ ಲಾಕ್ಡೌನ್ ಸಡಿಲಿಕೆ ಬಳಿಕ ಭಾನುವಾರ ಜಿಲ್ಲೆಯಾದ್ಯಂತ ಸಂಪೂರ್ಣ ವ್ಯಾಪಾರ-ವಹಿವಾಟು ಸ್ತಬ್ಧಗೊಳ್ಳಲಿದೆ.
ಕೆಲವರಿಗೆ ಕರ್ಫ್ಯೂ ಜಾರಿಯಲ್ಲಿದ್ದರೂ ಅನಾವಶ್ಯಕವಾಗಿ ಓಡಾಡುವುದು ಫ್ಯಾಶನ್ ಆಗಿಬಿಟ್ಟಿದೆ. ಬೇಕಾಬಿಟ್ಟಿಯಾಗಿ ಓಡಾಡುವವರಿಗೆ ಬರೀ ಕೇಸ್ ದಾಖಲಿಸುವುದು ಮಾತ್ರವಲ್ಲ. ಕಾನೂನಿನ ಪ್ರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಸ್ಪಿಗೆ ಸೂಚಿಸಲಾಗಿದೆ.
| ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. 14 ದಿನ ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕು. ಪ್ರತಿ ಹಳ್ಳಿಗೂ ಮಾನಿಟರಿಂಗ್ ಕಮಿಟಿ ಮಾಡಬೇಕು. ಮಾಸ್ಕ್ ಧರಿಸದವರು ಪ್ರಭಾವಿ ವ್ಯಕ್ತಿಗಳಾಗಿದ್ದರೂ ದಂಡ ವಿಧಿಸಬೇಕು.
| ಎಚ್.ಆರ್.ಬಸವರಾಜಪ್ಪ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷ
ಸರ್ಕಾರಿ ಕಚೇರಿಗಳು, ಅಂಗಡಿಗಳಲ್ಲಿ ಸ್ವಯಂ ಚಾಲಿತ ಸ್ಯಾನಿಟೈಸರ್ ಯಂತ್ರಗಳನ್ನು ಅಳವಡಿಸಬೇಕು. ಕರೊನಾ ಚಿಕಿತ್ಸೆಗೆ ಪೂರ್ಣವಾಗಿ ಕೆಲ ಖಾಸಗಿ ಆಸ್ಪತ್ರೆಗಳನ್ನು ಜಿಲ್ಲಾಡಳಿತ ವಹಿಸಿಕೊಳ್ಳಬೇಕು.
| ವಸಂತ್ಕುಮಾರ್, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ
ಏನಿರುತ್ತೆ ? ——————- ಏನಿರಲ್ಲ ?
ಹಾಲು———————ಖಾಸಗಿ, ಕೆಎಸ್ಸಾರ್ಟಿಸಿ ಬಸ್
ಪೇಪರ್—–—————ಆಟೋ, ಟ್ಯಾಕ್ಸಿ
ಮೆಡಿಕಲ್ ಸ್ಟೋರ್ಸ್———-ವ್ಯಾಪಾರ-ವಹಿವಾಟು
ಆಸ್ಪತ್ರೆಗಳು ————– ಕಟ್ಟಿಂಗ್ ಶಾಪ್
ಪೆಟ್ರೋಲ್ ಬಂಕ್ ————–—ಮಾಲ್
ಹೋಟೆಲ್ನಲ್ಲಿ ಪಾರ್ಸೆಲ್ ಮಾತ್ರ ಇರುತ್ತೆ