ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಲಕ್ಷ್ಮಣಪುರ ಹಾಡಿಗೆ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಗೃಹಜ್ಯೋತಿ ಯೋಜನೆ ಜಾರಿಗಾಗಿ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
‘ವಿಜಯವಾಣಿ’ ಜು.24ರಂದು ‘ಗಿರಿಜನರಿಗೆ ಸಿಗದ ಗ್ಯಾರಂಟಿ ಭಾಗ್ಯ’ ಶೀರ್ಷಿಕೆಯಡಿ ಪ್ರಕಟಿಸಿದ್ದ ವಿಶೇಷ ವರದಿ ಗಮನಿಸಿದ ಸೆಸ್ಕ್ ಅಧಿಕಾರಿಗಳು ಸೋಮವಾರ ಹಾಡಿಗೆ ಭೇಟಿ ನೀಡಿದರು. ಸೆಸ್ಕ್ ಜೆಇಗಳಾದ ವಿಜಯ್ಕುಮಾರ್, ಮಹಂತಪ್ಪ, ಮಾರ್ಗದಾಳುಗಳಾದ ರವಿ, ಕೇಶವ ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಎಇಇ ಸಿದ್ದಪ್ಪ, ಸೆಸ್ಕ್ ಸಿಬ್ಬಂದಿ ಹಾಡಿಯ 25 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ. ಸೂಕ್ತ ದಾಖಲೆಗಳೊಂದಿಗೆ ಫಲಾನುಭವಿಗಳನ್ನು ಗುರುತಿಸಿ ಗೃಹಜ್ಯೋತಿ ಯೋಜನೆ ಜಾರಿಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.