ಮೈಸೂರು: ಭೂಮಿ ಕಳೆದುಕೊಂಡ 12 ರೈತ ಕುಟುಂಬಗಳಿಗೆ ಉದ್ಯೋಗ ನೀಡದಿರುವ ಆಟೋ ಲಿವ್ ಕಂಪನಿಯ ಧೋರಣೆ ಖಂಡಿಸಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೊಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಕಚೇರಿಯ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಆರಂಭಿಸುವ ಮುನ್ನ ರೈತರ ಕುಟುಂಬಕ್ಕೆ ಉದ್ಯೋಗ ನೀಡುವ ಆಶ್ವಾಸನೆ ನೀಡಲಾಗಿತ್ತು. ಇದನ್ನು ನಂಬಿ ರೈತರು ತಮ್ಮ ಜಮೀನು ನೀಡಿದ್ದರು. ಆದರೀಗ ಆಟೋ ಲಿವ್ ಕಂಪನಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಕೆಐಎಡಿಬಿ ಅಧಿಕಾರಿಗಳು ರೈತರ ಕುಟುಂಬಕ್ಕೆ ಉದ್ಯೋಗ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಭೂಮಿ ಕಳೆದುಕೊಂಡು ಕುಟುಂಬಗಳು ಅತಂತ್ರವಾಗಿವೆ. ಇತ್ತ ಜಮೀನು ಸಹ ಇಲ್ಲ, ಅತ್ತ ಉದ್ಯೋಗವೂ ಇಲ್ಲ ಎಂಬ ಸಂಕಷ್ಟಕ್ಕೆ ಸಿಲುಕಿಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ನಿಯಮದ ಪ್ರಕಾರ ಭೂಮಿ ಕಳೆದುಕೊಂಡ ರೈತ ಕುಟುಂಬ ಸದಸ್ಯರಿಗೆ ಕೂಡಲೇ ಉದ್ಯೋಗ ನೀಡಬೇಕು. ಇಲ್ಲವೇ ಭೂಮಿ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆ ಈಡೇರದಿದ್ದರೆ ಮೈಸೂರು ತಾಲೂಕಿನ ಕಡಕೊಳ ಕೈಗಾರಿಕಾ ವಲಯದ ಎಲ್ಲ ರಸ್ತೆಗಳನ್ನು ಮುಚ್ಚುವುದರ ಮೂಲಕ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ವಲಯ ಅಧ್ಯಕ್ಷ ವಿದ್ಯಾಸಾಗರ್, ಮುಖಂಡರಾದ ಮಂಜು ಕಿರಣ್, ರಘು ಗಳಿಗರಹುಂಡಿ, ವೆಂಕಟೇಶ್, ಶಂಕ್ರಣ್ಣ, ಮಾದೇವ ನಾಯಕ, ಸತೀಶ್ ಇನ್ನಿತರರು ಇದ್ದರು.