ಹುಬ್ಬಳ್ಳಿ: ಬೇಗ ಕೆಟ್ಟು ಹೋಗುವ ಕೃಷಿ ಉತ್ಪನ್ನಗಳ ಸಾಗಾಟಕ್ಕಾಗಿ ನೈಋತ್ಯ ರೈಲ್ವೆ ಪ್ರಾರಂಭಿಸಿದ ಕೆಎಸ್ಆರ್ ಬೆಂಗಳೂರು- ಹಜರತ್ ನಿಜಾಮುದ್ದೀನ್- ಕೆಎಸ್ಆರ್ ಬೆಂಗಳೂರು ಕಿಸಾನ್ ಎಕ್ಸ್ಪ್ರೆಸ್ ವಿಶೇಷ ರೈಲು ಶನಿವಾರ 56.54 ಟನ್ ಸರಕು ಸಾಗಿಸಿದೆ.
ಮೈಸೂರು, ಹುಬ್ಬಳ್ಳಿ ಮತ್ತು ಪುಣೆ ಮಾರ್ಗದಲ್ಲಿ ವಿವಿಧ ನಿಲ್ದಾಣಗಳಿಂದಲೂ ಕೃಷಿಕರು ಹಾಗೂ ವ್ಯಾಪಾರಸ್ಥರು ಈ ರೈಲಿನಲ್ಲಿ ಸರಕು ಸಾಗಿಸಬಹುದಾಗಿದೆ.
ಬೆಂಗಳೂರು ವಿಭಾಗದಿಂದ 0.32 ಟನ್, ಮೈಸೂರು ವಿಭಾಗದಿಂದ 55.01 ಟನ್, ಹುಬ್ಬಳ್ಳಿ ವಿಭಾಗದಿಂದ 1.21 ಟನ್ನಷ್ಟು ಕೃಷಿ ಉತ್ಪನ್ನ, ಮೀನುಗಳು, ಒಣ ಹಣ್ಣುಗಳು ಹಾಗೂ ಇತರ ಸರಕನ್ನೂ ಸಾಗಿಸಲಾಗಿದೆ. ಮಂಗಳವಾರ ಬೆಳಗಿನಜಾವ 1.30ಕ್ಕೆ ಆದರ್ಶನಗರ ತಲುಪುವ ಮೂಲಕ 56.45 ಗಂಟೆಯಲ್ಲಿ 2,716 ಕಿಮೀ ಪಯಣ ಪೂರ್ಣಗೊಳಿಸಲಿದೆ. ಕಿಸಾನ್ ರೈಲು ಮೊದಲ ಸಂಚಾರದಲ್ಲಿ 38.34 ಟನ್ ಹಾಗೂ ಸೆ. 26ರಂದು ನಡೆಸಿದ 2ನೇ ಸಂಚಾರದಲ್ಲಿ 81.38 ಟನ್ ಸರಕು ಸಾಗಿಸಿತ್ತು.
ಈ ರೈಲು ಸಂಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಎ.ಕೆ. ಸಿಂಗ್, ದೇಶದ ಬೆನ್ನೆಲುಬಾಗಿರುವ ರೈತರ ಅನುಕೂಲಕ್ಕಾಗಿ ಕಿಸಾನ್ ರೈಲು ಸಂಚಾರ ಪ್ರಾರಂಭಿಸಲಾಗಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೂ ಈ ರೈಲು ಸಹಾಯಕವಾಗಲಿದೆ. ಬೇಗ ಕೆಡುವಂತಹ ಸರಕುಗಳನ್ನು ತುರ್ತಾಗಿ ಸಾಗಿಸಲು ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಈ ರೈಲಿನಲ್ಲಿ ಸರಕು ಸಾಗಣೆಗೆ ಯಾವುದೇ ಮಿತಿ ಇಲ್ಲ. ರೈತರು, ವ್ಯಾಪಾರಸ್ಥರು ಕಿಸಾನ್ ರೈಲು ಸಂಚಾರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.