ಕೆ.ಆರ್.ಸಾಗರ:ಸಮೀಪದ ಮೊಗರಹಳ್ಳಿ(ಮಂಟಿ) ಗ್ರಾಮದ ಬಳಿ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿದ ಸಾರ್ವಜನಿಕ ಬಸ್ ನಿಲ್ದಾಣವನ್ನು ಅನುಮತಿ ಇಲ್ಲದೆ ಕೆಡವಿದ ಗುತ್ತಿಗೆದಾರನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮೈಸೂರಿನಿಂದ ಕೆ.ಆರ್.ಸಾಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ಇದ್ದ ಸಾರ್ವಜನಿಕ ಬಸ್ ನಿಲ್ದಾಣವನ್ನು ಮೂಡಾ ಅನುದಾನದಲ್ಲಿ ರಸ್ತೆ ನಿರ್ಮಿಸುತ್ತಿರುವ ಗುತ್ತಿಗೆದಾರ ಜೆಸಿಬಿ ಯಂತ್ರ ಬಳಸಿ ರಾತ್ರೋರಾತ್ರಿ ನೆಲಸಮ ಮಾಡಿದ್ದು, ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಈ ಪ್ರಕರಣದಿಂದ ಆಕ್ರೋಶಗೊಂಡ ಸ್ಥಳೀಯರು ಶುಕ್ರವಾರ ಬೆಳಗ್ಗೆ ಹೊಸಹಳ್ಳಿ ಗ್ರಾಪಂ ಪಿಡಿಒ ಅವರನ್ನು ಪ್ರಶ್ನಿಸಿದ್ದು, ‘ಪಂಚಾಯಿತಿ ವತಿಯಿಂದ ಬಸ್ ನಿಲ್ದಾಣವನ್ನು ಒಡೆದು ಹಾಕಿಲ್ಲ. ಅನುಮತಿ ಕೂಡ ನೀಡಿಲ್ಲ’ ಎಂದು ಉತ್ತರಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಚನ್ನಕೇಶವ ಹಾಗೂ ಸಿಬ್ಬಂದಿ, ಅನುಮತಿ ಇಲ್ಲದೆ ಬಸ್ ನಿಲ್ದಾಣ ಒಡೆದು ಹಾಕಿದ್ದಾರೆ. ಇದು ಕಾನೂನು ಬಾಹಿರ. ನಾಳೆಯೇ ತಪ್ಪಿತಸ್ಥ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.