ಆನಂದಪುರ: ಅಗ್ನಿಪಥ ಯೋಜನೆಯಿಂದಾಗಿ ಸೇನೆಯಲ್ಲಿ ಉದ್ಯೋಗಾವಕಾಶ ಹೆಚ್ಚಳವಾಗಿದೆ. ಯುವಕರು ನಾಲ್ಕು ವರ್ಷದ ಸೈನಿಕ ಸೇವೆಯಿಂದ ನಿವೃತ್ತಿಯಾದ ಬಳಿಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳಲು ನಿಯಮ ರೂಪಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಹಾವೇರಿಯಲ್ಲಿ ನಡೆಯುವ ಅಗ್ನಿಪಥ ಸೇನಾ ನೇಮಕಾತಿ ನಿಮಿತ್ತ ಇಲ್ಲಿಗೆ ಸಮೀಪದ ಮುರುಘಾ ಮಠದ ಆವರಣದಲ್ಲಿ ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್ ಹಮ್ಮಿಕೊಂಡಿದ್ದು 15 ದಿನಗಳ ಪೂರ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಗ್ನಿಪಥದಿಂದ ನಿವೃತ್ತಿಯಾದ ಯುವಕರನ್ನು ಪೊಲೀಸ್, ಅಗ್ನಿಶಾಮಕ ದಳ ಇತ್ಯಾದಿ ಸೇವೆಗಳ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುವುದು. ಹೀಗೆ ನೇಮಕಗೊಂಡವರಿಗೆ 7-8 ತಿಂಗಳ ಕಾಲ ನೀಡುವ ತರಬೇತಿ ವೆಚ್ಚ ಉಳಿತಾಯವಾಗಲಿದೆ. ಮಲೆನಾಡಿನ ಈ ಪರಿಸರದಲ್ಲಿ ಇಂತಹ ತರಬೇತಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಗ್ರಾಮೀಣ ಪ್ರದೇಶದ ಬಡ ರೈತಾಪಿ ಕುಟುಂಬದ ಯುವಕರು ಸೇನೆಗೆ ಸೇರಿ ದೇಶಸೇವೆ ಮಾಡುತ್ತಿದ್ದಾರೆ. ಸೇನೆಯಿಂದ ನಿವೃತ್ತಿಯಾದರೂ ಕಿಶೋರ್ಕುಮಾರ್ ನೇತೃತ್ವದ ಯೋಧರು ಇಂತಹ ತರಬೇತಿ ನೀಡಿ ಪರೋಕ್ಷವಾಗಿ ದೇಶಸೇವೆಯ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ ಎಂದರು.