More

    ರಾಜ್ಯೋತ್ಸವ ಪ್ರಶಸ್ತಿಗೆ ಪಿ.ತಿಪ್ಪೇಸ್ವಾಮಿ ಭಾಜನ

    ಚಿತ್ರದುರ್ಗ: ಸಿನಿಮಾ ಆಗಲಿ, ರಂಗಭೂಮಿಯಾಗಲಿ ಪಾತ್ರಗಳಿಗೆ ಜೀವ ತುಂಬುವಲ್ಲಿ ಕಲಾವಿದರಿಗೆ ಮಾರ್ಗದರ್ಶನ ನೀಡುವ ನಿರ್ದೇಶಕರ ಪಾತ್ರ ಅನನ್ಯ. ಆ ಸಾಲಿನಲ್ಲಿ ಜಿಲ್ಲೆಯ ವಿಶೇಷ ವ್ಯಕ್ತಿಯೊಬ್ಬರು ರಂಗಭೂಮಿ ಕ್ಷೇತ್ರದ ಶಕ್ತಿಯಾಗಿ, ಕರ್ನಾಟಕ ಸುವರ್ಣ ಸಂಭ್ರಮದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಕರ್ತವ್ಯದ ವೇಳೆ ಶಾಲೆಯ ಶಿಕ್ಷಕರಾಗಿ, ನಂತರ ಹಳ್ಳಿಗಳಲ್ಲಿ ಆಯೋಜಿಸುತ್ತಿದ್ದ ನಾಟಕಗಳನ್ನು ನಿರ್ದೇಶಿಸಿ, ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಜಿಲ್ಲೆಯ ಚಳ್ಳಕೆರೆಯ ಪಿ.ತಿಪ್ಪೇಸ್ವಾಮಿ ಅವರು ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಸರ್ಕಾರ ಆಯ್ಕೆ ಮಾಡಿದೆ.

    ದಿ. ವೀರಣ್ಣ-ವೀರಮ್ಮ ಅವರ ಏಕೈಕ ಪುತ್ರನಾಗಿ ಚಳ್ಳಕೆರೆಯಲ್ಲಿ 1946ರಲ್ಲಿ ಜನಿಸಿದ ಇವರು, ಬಾಲ್ಯದಿಂದಲೂ ನಾಟಕ-ಸಂಗೀತದತ್ತ ಒಲವು ಬೆಳೆಸಿಕೊಂಡವರು. ಬಿ.ಎ ಪದವಿ ನಂತರ ಬಿ.ಇಡಿ ಶಿಕ್ಷಣ ಪೂರೈಸಿ ಚಳ್ಳಕೆರೆಯ ಕಾಟಪ್ಪನಹಟ್ಟಿಯಲ್ಲಿನ ಕಾಟಂಲಿಂಗೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ 1973ರಿಂದ 2004ರವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

    1975ರಲ್ಲಿ ಕಾಟಂಲಿಂಗೇಶ್ವರ ನಾಟಕ ಸಂಘ ಸ್ಥಾಪಿಸಿದರು. ಈ ಮೂಲಕ ಜಿಲ್ಲಾದ್ಯಂತ ನೂರಾರು ನಾಟಕಗಳ ಪ್ರದರ್ಶನ, ನಿರ್ದೇಶನಕ್ಕೆ ಕಾರಣವಾಯಿತು. ಮರಡಿಹಳ್ಳಿ ಸೀತಾರಾಮರೆಡ್ಡಿ ವಿರಚಿತ ರಾಜಾವೀರ ಮದಕರಿನಾಯಕ ನಾಟಕ ತಿಪ್ಪೇಸ್ವಾಮಿ ಅವರಿಗೆ ಖ್ಯಾತಿ ತಂದುಕೊಟ್ಟಿದ್ದಲ್ಲದೇ, ನೂರಾರು ಪ್ರದರ್ಶನ ಕಂಡಿತು. ಇದು ದೆಹಲಿಯಲ್ಲೂ ಪ್ರದರ್ಶನ ಕಂಡಿದ್ದು ವಿಶೇಷ.

    ತಮ್ಮ ಮ್ಯಾಸಬೇಡ ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ವೀರರಾದ ಗಾದ್ರಿ ಪಾಲನಾಯಕ ಮತ್ತು ಜಗಳೂರು ಪಾಪನಾಯಕ ನಾಟಕ ರಚನೆಗೆ ಅಗತ್ಯವಾದ ಮೂಲದ್ರವ್ಯವನ್ನು ಒದಗಿಸಿ ಕಾಲುವೇಹಳ್ಳಿ ಗಾದಿರಪ್ಪ ಎಂಬುವವರಿಂದ ನಾಟಕಗಳನ್ನು ಬರೆಯಿಸುವಲ್ಲಿ, ಅವುಗಳನ್ನು ರಂಗಭೂಮಿಗೆ ತರುವಲ್ಲಿ, ಬುಡಕಟ್ಟು ಸಮುದಾಯಕ್ಕೆ ಅವರ ಚರಿತ್ರೆ ತಿಳಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

    ಸಂಗೀತ ಮತ್ತು ನಿರ್ದೇಶನದ ಮೂಲಕ ಹವ್ಯಾಸಿ ಗ್ರಾಮೀಣ ರಂಗಭೂಮಿಯನ್ನು ರೂಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ರಕ್ತರಾತ್ರಿ, ಭಕ್ತಸುಧನ್ವ, ಕುರುಕ್ಷೇತ್ರ, ದೇವಿ ಮಹಾತ್ಮ್ಮೆ, ದಾನಶೂರ ಕರ್ಣ, ವೀರಾಭಿಮನ್ಯು ಮುಂತಾದ ಪೌರಾಣಿಕ ನಾಟಕಗಳಲ್ಲದೇ, ಇಪ್ಪತ್ತೈದಕ್ಕೂ ಹೆಚ್ಚು ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ, ಸಂಗೀತ ನೀಡಿದ್ದಾರೆ.

    ಗ್ರಾಮೀಣ ರಂಗಭೂಮಿ ಸೇವೆ ಗುರುತಿಸಿ 2001ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 2014ರಲ್ಲಿ ನಾಟಕ ಆಕಾಡೆಮಿಯ ಸದಸ್ಯತ್ವ ನೀಡಿ ಗೌರವಿಸಿದೆ. ಎಪ್ಪತ್ತರ ಇಳಿವಯಸ್ಸಲ್ಲೂ ಬತ್ತದ ಅವರ ಉತ್ಸಾಹ ಜಾನಪದ ರಂಗಭೂಮಿಯ ಮುಮ್ಮೇಳಗಾರರ (ಭಾಗವತರ) ಸಂಘವನ್ನು ಕಟ್ಟಿ ಅವರಿಗೆ ನ್ಯಾಯಯುತವಾಗಿ ದಕ್ಕಬೇಕಾದ ಮಾಸಾಶನ ಸವಲತ್ತುಗಳನ್ನು ಕೊಡಿಸಲು ಸಂಘಟಿತ ಹೋರಾಟ ನಡೆಸಿದ್ದಾರೆ.

    ಚಳ್ಳಕೆರೆ ತಾಲೂಕು ಕಸಾಪ ಅಧ್ಯಕ್ಷರಾಗಿ 2005-2007, 2008-2010 ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಸಂಚಾಲಕರಾಗಿ ಜಿಲ್ಲಾ ಜಾನಪದ ಜಾತ್ರೆ, ಕಾಲೇಜು ರಂಗೋತ್ಸವ ನಡೆಸಿದ್ದಾರೆ.

    ಜಾನಪದ ರಂಗ ಚಟುವಟಿಕೆ ಗುರುತಿಸಿ 2015-16ರಲ್ಲಿ ಜಿಲ್ಲಾ ‘ವಾಲ್ಮೀಕಿ’, ಯಾದಗಿರಿ ಜಿಲ್ಲೆಯಲ್ಲಿ 2017ರಲ್ಲಿ ನಡೆದ ಜಾನಪದೋತ್ಸವದಲ್ಲಿ ‘ಜಾನಪದ ಕಲಾಲೋಕ’, 2018ರ ಸಿಜಿಕೆ ನಾಟಕೋತ್ಸವದಲ್ಲಿ ‘ಸಿಜಿಕೆ’ ಪ್ರಶಸ್ತಿಗಳ ಗೌರವ ಸಂದಿವೆ.

    ಪ್ರಸ್ತುತ ಮಹತ್ವಾಕಾಂಕ್ಷಿಯ ಕ್ಷೇತ್ರಕಾರ್ಯಾಧಾರಿತ ಕೃತಿ ‘ಮ್ಯಾಸ ಬೇಡರ ಮೌಖಿಕ ಕಥನಗಳು’ 2019ರಲ್ಲಿ ಪ್ರಕಟವಾಗಿದೆ. ಈ ಕೃತಿಗೆ 2020 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಸಂಶೋಧನೆ ಪ್ರಕಾರದಲ್ಲಿ ಅತ್ಯುತ್ತಮ ಕೃತಿಯೆಂದು ಪರಿಗಣಿಸಿ, ಪುಸ್ತಕ ಬಹುಮಾನ ಪ್ರಶಸ್ತಿ ನೀಡಿ ಗೌರವಿಸಿದೆ.

    ವೃತ್ತಿಯೊಂದಿಗೆ ಸಾಹಿತ್ಯ-ಸಂಗೀತಗಳ ಪ್ರವೃತ್ತಿಯೂ ಹೆಚ್ಚಾಯಿತು. ನಾಟಕಗಳ ಗೀಳು ಹಾರ್ಮೋನಿಯಂ ಕಲಿಯುವಂತೆ ಮಾಡಿತು. ಅದು ಕ್ಯಾಸಿಯೋ ಕೀಬೋರ್ಡ್ ಹಂತದವರೆಗೂ ಬೆಳೆಸಿತು ಎಂದು ರಂಗ ನಿರ್ದೇಶಕ ಪಿ.ತಿಪ್ಪೇಸ್ವಾಮಿ ಅನಿಸಿಕೆ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts