ಬೆಳಗಾವಿ: ನವೆಂಬರ್ 1ರಂದು ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ 67ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿಸಿರುವ ಕನ್ನಡಪರ ಹೋರಾಟಗಾರರು ಹಾಗೂ ಪತ್ರಕರ್ತರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ, ಗೌರವಿಸಲು ನಿರ್ಧರಿಸಲಾಗಿದೆ. ಸನ್ಮಾನ ಆಯ್ಕೆ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸನ್ಮಾನ ಆಯ್ಕೆ ಉಪ ಸಮಿತಿ ಸಭೆಯಲ್ಲಿ ಒಟ್ಟು 14 ಜನರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ, ಗೌರವಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸನ್ಮಾನಿತರ ವಿವರ: ಕನ್ನಡದ ಹಿರಿಯ ಹೋರಾಟಗಾರರಾದ ವಡಗಾವಿಯ ಶ್ರೀನಿವಾಸ ತಾಳೂಕರ, ಸವದತ್ತಿಯ ಶ್ರೀಧರ ಅಸಂಗಿಹಾಳ, ಬೈಲಹೊಂಗಲ ತಾಲೂಕಿನ ದೊಡವಾಡದ ಮಲ್ಲಪ್ಪ ಯರಿಕಿತ್ತೂರ, ಬೆಳಗಾವಿಯ ಟಿ.ಶಾಂತಮ್ಮ, ಜಾಧವ ನಗರದ ವಿಜಯಕುಮಾರ ಶೆಟ್ಟಿ, ಟಿಳಕವಾಡಿಯ ಹಾಸೀಮ್ ಬಾವಿಕಟ್ಟಿ, ಚಿಕ್ಕೋಡಿಯ ಅಲ್ಲಮಪ್ರಭು ಚಿಂಚಣಿ ಮಠ, ಭಾವಕಣ್ಣ ಭಂಗ್ಯಾಗೋಳ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.ದಿಗ್ವಿಜಯ ನ್ಯೂಸ್ ಕ್ಯಾಮರಾಮನ್ ರವಿರಾಜ್ ಮಬ್ರೂಮಕರ್, ಹಿರಿಯ ಪತ್ರಕರ್ತರಾದ ರಾಜು ಗವಳಿ, ಮಂಜುನಾಥ ಪಾಟೀಲ, ಅರವಿಂದ ದೇಶಪಾಂಡೆ, ವಿರೂಪಾಕ್ಷ ಕವಟಗಿ, ಛಾಯಾಗ್ರಾಹಕ ಸದಾಶಿವ ಸಂಕಪ್ಪಗೋಳ ಹಾಗೂ ಪತ್ರಿಕಾ ವಿತರಕ ಮಹಾದೇವ ತುರಮರಿ ಅವರನ್ನು ಸನ್ಮಾನಿಸಲಾಗುವುದು ಎಂದು ಎಚ್.ವಿ. ದರ್ಶನ್ ತಿಳಿಸಿದ್ದಾರೆ.