ಸಿದ್ದಾಪುರ: ತಾಲೂಕಿನ ತುರಕುಳಿ-ಆಲಳ್ಳಿ ಎಸ್ಸಿ ಕಾಲನಿ ರಸ್ತೆಯ ಹಲವೆಡೆ ಗುಡ್ಡ ಕುಸಿದಿದೆ. ಅಲ್ಲದೆ, ಚರಂಡಿಗಳಲ್ಲಿ ಮಣ್ಣು ತುಂಬಿದೆ. ಹೀಗಾಗಿ, ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ಮೂರು ಕಿ.ಮೀ. ಉದ್ದದ ಈ ರಸ್ತೆಯನ್ನು ನಮ್ಮ ಗ್ರಾಮ- ನಮ್ಮ ರಸ್ತೆ ಯೋಜನೆಯಡಿ 293.80 ಲಕ್ಷ ರೂ.ಗಳಲ್ಲಿ ಅಭಿವೃದ್ಧಿ ಮಾಡಲಾಗಿದೆ. 2017ರಲ್ಲಿ ಕಾಮಗಾರಿ ಪ್ರಾರಂಭಿಸಿ 2019ರಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ, ರಸ್ತೆ ನಿರ್ವಹಣೆ 2024ರವರೆಗೆ ಇದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರಸ್ತೆ ಅವಸ್ಥೆ ಏನಾಗಿದೆ ಎಂದು ನೋಡಲೂ ಬಂದಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ರಸ್ತೆಯಲ್ಲಿ ಹತ್ತಾರು ಕಡೆ ಗುಡ್ಡ ಕುಸಿದು ಚರಂಡಿಗಳಲ್ಲಿ ಮಣ್ಣು ತುಂಬಿರುವುದರಿಂದ ನೀರೆಲ್ಲ ರಸ್ತೆಯ ಮೇಲೆ ಹರಿಯುತ್ತಿದೆ. ಅಲ್ಲದೆ, ಕೆಲವೆಡೆ ಗುಡ್ಡವೇ ರಸ್ತೆಗೆ ಬಂದಿದೆ. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಗುಡ್ಡ ಕುಸಿದಿರುವುದು ಹಾಗೂ ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿರುವುದು ಸತ್ಯ. ಇದನ್ನು ತೆರವುಗೊಳಿಸುವುದಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಮಂಜೂರಾತಿ ನೀಡಿದ ಮೇಲೆ ಕಾಮಗಾರಿ ನಡೆಸಲಾಗುವುದು. ಕರೊನಾ ವೈರಸ್ ಹರಡುವಿಕೆಯಿಂದಾಗಿ ಎಲ್ಲ ಕಾಮಗಾರಿಗಳ ನಿರ್ವಹಣೆಗೂ ತೊಂದರೆ ಆಗಿದೆ.
| ಶರಣಬಸಪ್ಪ ಎಇಇ ಪಿಎಂಜಿಎಸ್ವೈ ಶಿರಸಿ
ಮಳೆಗಾಲದ ಪೂರ್ವದಲ್ಲಿ ಮಾಡಬೇಕಾದ ಕಾಮಗಾರಿ ಮಾಡದಿರುವುದರಿಂದ ಗುಡ್ಡ ಕುಸಿದು ಬೀಳುವಂತಾಗಿದೆ. ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದೆ. ನೀರೆಲ್ಲ ರಸ್ತೆ ಮೇಲೆ ಹರಿಯುವಂತಾಗಿದೆ. ರಸ್ತೆ ನಿರ್ವಹಣೆ ಮಾಡುತ್ತಿರುವ ಇಲಾಖೆಯ ಕಾರ್ಯವೈಖರಿ ಕುರಿತು ಜನತೆಗೆ ಬೇಸರ ಉಂಟಾಗಿದೆ.
| ವಿಜಯ ಹೆಗಡೆ ಆಲಳ್ಳಿ ಹಾಗೂ ಸ್ಥಳೀಯ ಗ್ರಾಮಸ್ಥರು