ರಾಣೆಬೆನ್ನೂರ: ನಗರದ ಗುತ್ತಲ ಮುಖ್ಯರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆಗಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ತೆಗೆದ ಗುಂಡಿಯನ್ನು ಈವರೆಗೂ ಮುಚ್ಚದ ಕಾರಣ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಗುತ್ತಲ ರಸ್ತೆ ಮಾರ್ಗವಾಗಿ ದೇವರಗುಡ್ಡ, ಗುತ್ತಲ, ಮೈಲಾರ, ಕುರುವತ್ತಿ, ಬಳ್ಳಾರಿ, ಗದಗ ಸೇರಿ ವಿವಿಧ ತಾಲೂಕು, ಜಿಲ್ಲೆಗಳ ಬಸ್ಗಳು, ಲಾರಿ, ಕಾರು ಸೇರಿ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತವೆ. ನಗರಸಭೆಯವರು ರಸ್ತೆಯ ಮಧ್ಯೆದಲ್ಲಿಯೇ ಗುಂಡಿ ತೋಡಿದ್ದಾರೆ. ಒಂದೂವರೆ ತಿಂಗಳಾದರೂ ಈ ಭಾಗದಲ್ಲಿ ಯಾವುದೇ ಕಾಮಗಾರಿ ಮಾಡುತ್ತಿಲ್ಲ. ಗುಂಡಿಯನ್ನೂ ಮುಚ್ಚುತ್ತಿಲ್ಲ. ಹೀಗಾಗಿ ವಾಹನ ಓಡಾಟಕ್ಕೆ ತೊಂದರೆ ಎದುರಾಗಿದೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀರಿನ ಪೈಪ್ ಅಳವಡಿಕೆ ಹಿನ್ನೆಲೆಯಲ್ಲಿ ಗುತ್ತಲ ರಸ್ತೆಯಲ್ಲಿ ಗುಂಡಿ ತೋಡಲಾಗಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ಸೂಚಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
| ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ