ಸುಧೀರ ಎಂ. ಕಳ್ಳೆ ರಾಯಬಾಗ: ತಾಲೂಕಿನ ರಾಯಬಾಗ-ಅಂಕಲಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಯಡ್ರಾಂವನಿಂದ (ಕಂಚಕರವಾಡಿ ಕ್ರಾಸ್) ನಸಲಾಪುರವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ಕೈಯಲ್ಲಿ ಜೀವನ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ. ಜತೆಗೆ ಮಳೆಯಾದರೆ ಸಾಕು ತಗ್ಗು-ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಇದರಿಂದ ಗುಂಡಿಗಳು ಕಾಣದೆ ಅನೇಕ ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.
ರಸ್ತೆ ಮೂಲಕ ಸಾವಿರಾರು ಜನ ಚಿಕ್ಕೋಡಿ ಹಾಗೂ ಮಿರಜಗೆ ಸಂಚರಿಸುತ್ತಾರೆ. ಜತೆಗೆ ಯಡ್ರಾಂವದಲ್ಲಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿದ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ದೊಡ್ಡ ಪ್ರಮಾಣದ ಗುಂಡಿಗಳಿರುವ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ದೊಡ್ಡ ಸವಾಲಾಗಿದೆ. ಗುಂಡಿಗಳಲ್ಲಿ ಕಬ್ಬಿನ ಟ್ರಾೃಕ್ಟರ್ ಸಿಲುಕಿದರೆ ಅದನ್ನು ಹೊರತೆಗೆಯುವವರೆಗೆ ಟ್ರಾೃಕ್ಟರ್ ಹಿಂದೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಅಪ್ಪಿತಪ್ಪಿ ಟ್ರಾೃಕ್ಟರ್ ಉರುಳಿದರೆ, ಗಂಟೆಗಟ್ಟಲೆ ವಾಹನ ದಟ್ಟಣೆ ಉಂಟಾಗುತ್ತದೆ.
ರಸ್ತೆ ನಿರ್ಮಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಗುಣಮಟ್ಟದ ರಸ್ತೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಕ್ರಮಕೈಗೊಳ್ಳಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.