ಯಾದಗಿರಿ: ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದು ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು.
ಗುರುವಾರ ನಗರದ ವಿಬಿಆರ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರಕ್ತದಾನ ದಿನಾಚರಣೆ ನಿಮಿತ್ತ ಭಾರತೀಯ ವೈದ್ಯಕೀಯ ಸಂಘದಿಂದ (ಐಎಂಎ) ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನ ಮಹಾದಾನ, ಒಂದು ಹನಿರಕ್ತ ಒಂದು ಅಮೂಲ್ಯ ಜೀವದ ಉಳಿಯುವಿಕೆಗೆ ನೆರವಾಗಲಿದೆ. ಭಾರತದಲ್ಲಿ ಬಹುಮಟ್ಟಿನ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು.
ರಕ್ತ ಕೃತಕವಾಗಿ ತಯಾರಿಸಲಾಗದ ಅಮೂಲ್ಯ ದೃವ್ಯ. ಒಬ್ಬರು ಮಾಡುವ ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಸಿದಂತಾಗುತ್ತದೆ. ಅಲ್ಲದೆ, ನಮ್ಮ ಆರೋಗ್ಯ ಸಹ ಸದೃಢಗೊಳ್ಳುತ್ತದೆ. ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ಆರೋಗ್ಯವಂತ ಪ್ರತಿಯೊಬ್ಬ ವಯಸ್ಕರು ರಕ್ತದಾನ ಮಾಡುವ ಮುಖಾಂತರ ಸಂಕಷ್ಟದಲ್ಲಿ ಇರುವ ರೋಗಿಯ ಜೀವ ಉಳಿಸಬೇಕು ಎಂದು ಸಲಹೆ ಮಾಡಿದರು.
ಆಸ್ಪತ್ರೆ ನಿದರ್ೇಶಕ ಡಾ.ವೀರಬಸವಂತರಡ್ಡಿ ಮುದ್ನಾಳ್ ಮಾತನಾಡಿ, ನಮ್ಮ ಬದಲಾದ ಆಹಾರ ಪದ್ದತಿ ಹಾಗೂ ಜೀವನ ಶೈಲಿಯಿಂದ ಉಂಟಾಗುವ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ ಮುಂತಾದ ಆರೋಗ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನಿಯಮಿತವಾಗಿ ವರ್ಷಕ್ಕೆ ಕನಿಷ್ಟ ಒಂದೆರಡು ಸಲ ರಕ್ತದಾನ ಮಾಡಬೇಕು. ಇದರಿಂದ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ ಎಂದರು.