ಬೆಳಗಾವಿ: ನಗರದಲ್ಲಿನ ಕಿಯೋನಿಕ್ಸ್ ಯುವ.ಕಾಂ ತರಬೇತಿ ಕೇಂದ್ರದಿಂದ ಖೊಟ್ಟಿ ದಾಖಲಾತಿ ಸೃಷ್ಟಿಸಿ, ಸರ್ಕಾರದ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಡಿಸಿಪಿ ರವೀಂದ್ರ ಗಡಾದಿ ಅವರಿಗೆ ವಕೀಲ ಆರ್.ಎಸ್.ಶಿರಗಾಂವೆ ಗುರುವಾರ ಮನವಿ ಸಲ್ಲಿಸಿದ್ದಾರೆ.
ಕಿಯೋನಿಕ್ಸ್ ಯುವ.ಕಾಂ ತರಬೇತಿ ಕೇಂದ್ರದ ಮುಖ್ಯಸ್ಥರಾದ ಲಕ್ಷಿ$್ಮ ಉದಯ ಶೆಟ್ಟಿ ಅವರು ಸರ್ಕಾರದ ಅಂಗ ಸಂಸ್ಥೆಯಾದ ಕಿಯೋನಿಕ್ಸ್ ಹೆಸರಲ್ಲಿ ಇಲ್ಲಿನ ನೆಹರೂ ನಗರದ ಖಾಸಗಿ ಬ್ಯಾಂಕ್ನಲ್ಲಿ “ಕಿಯೋನಿಕ್ಸ್ ಎಬಿಸಿಎ’ ಖಾತೆ ತೆರೆದಿದ್ದಾರೆ. ಅಲ್ಲದೆ, ಆ ಖಾತೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ಹಣ ಪಡೆದು, ಯಾವುದೇ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಸ್ಥೆ ನಡೆಸಿದ ವ್ಯವಹಾರದ ಕುರಿತು ಆರ್ಟಿಐ ಮನವಿ ಸಲ್ಲಿಸಿದರೂ ಸರಿಯಾಗಿ ಸ್ಪಂದಿಸಿಲ್ಲ. ತಮಗೆ ಈ ಹಿಂದೆ ಮನವಿ ಮಾಡಿದ್ದಾಗ, ಇಲಾಖೆ ಕ್ರಮಕ್ಕೆ ಮುಂದಾದಾಗ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಇದರಿಂದ ಅವರು ತಪ್ಪೆಸಗಿರುವುದು ಸಾಬೀತಾದಂತಾಗಿದ್ದು, ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.